30.12.07

ವರುಷ ಸಾಗುತ್ತಲಿದೆ ಪ್ರತಿ ನಿಮಿಷ



ಅಬ್ಬರದ ತೆರೆಯಂತೆ
ಉರುಳುರುಳಿ
ಹೋಗಿದೆ ಮತ್ತೊಂದು ವರುಷ
ತನ್ನದೇ ಹೊತ್ತು, ಗತ್ತಿನಲ್ಲಿ
ಉರುಳುವ...ಮತ್ತೆ
ಮರಳುವ ತೆರೆಗೆ
ದಡ ಸ್ವಾಗತ ಕೋರುವುದಿಲ್ಲ!


ಸಮುದ್ರ ತಟದಲ್ಲಿ
ಹಾರುವ ಹಕ್ಕಿಗಳು
ಕಳೆದ ಸಂವತ್ಸರದ
ಲೆಕ್ಕ ಹಾಕಿಲ್ಲ
ತಮ್ಮದೇ ಗುರಿ
ತಮ್ಮದೇ ಬದುಕು


ನಭೋಮಂಡಲದ
ಮುಗಿಲುಗಳಂತೆ
ಕರಾವಳಿಯ ಮಾರುತದಂತೆ
ವರುಷ ಬೀಸುಗಾಲಿಕ್ಕಿದೆ
ಸಿಕ್ಕಿ ತತ್ತರಿಸಿದವರೆಷ್ಟೋ
ತೇಲಿಹೋದವರೆಷ್ಟೋ


ಹೆದ್ದಾರಿಯ ವಾಹನಗಳಂತೆ
ಹರಿದುಹೋಗಿದೆ
ವರುಷ ಯಾವ ಸಿಗ್ನಲ್ಲಿಗೂ
ಕಾಯದೆ...
ಓಡುತ್ತಲೇ ಇರುವ
ರೈಲಿನಂತೆ ಯಾವ
ನಿಲ್ದಾಣಗಳಲ್ಲೂ
ನಿಲ್ಲದೆ...



ಮತ್ತೊಂದು ಖಾಲಿಪುಟ
ಮಗುಚಿಕೊಳ್ಳುತ್ತಲಿದೆ
ಹೊಸಪುಟದಲ್ಲಿ ಎಷ್ಟು
ನಲಿವಿನ ಕಲೆ-ನೋವಿನ
ಗೆರೆಗಳಿವೆಯೋ
ಬಲ್ಲವರಾರು?


ಕಾಲಾಂತರದ ಚಕ್ರಕ್ಕೆ
ಓಗೊಟ್ಟು ಮುನ್ನುಗ್ಗುವ
ವರ್ಷದ ವೇಗದಲ್ಲಿ
ಕಳೆದುಕೊಂಡದ್ದು
ಹುಡುಕಲು, ದೂರದಲ್ಲಿ
ಕಂಡದ್ದು ಹಿಡಿಯಲು
ಸಾಮರ್ಥ್ಯ ಬೇಕು

ಗೊತ್ತುಗುರಿಯೇ ಇಲ್ಲದ
ಎಂದೆಂದೂ ಸೇರದ
ಹಳಿಗಳಂತೆ ಸಾಗುತ್ತಲೇ ಇದೆ ವರುಷ
ಪ್ರತಿ ನಿಮಿಷ!

22.12.07

ಮೂರು ಬಿಂದುಗಳು


ಬೆಳಗಾದರೂ ಕತ್ತಲ
ತೆರೆ ಸರಿಯದ ಬೀದಿಗಳಲ್ಲಿ
ಕಸಹೊಡೆಯುತ್ತಿದ್ದಾಳೆ
ಹರಕು ಸೀರೆ ಈರಮ್ಮ...
ಇಲ್ಲಿ
ಮನೆಮೂಲೆಯಲ್ಲಿ
ಬಿದ್ದಿರುವ
ಪೊರಕೆಗೆ
ಜೇಡರಬಲೆ ತುಂಬಿಕೊಂಡಿದೆ


*************


ಬಾವಿ ಇದೆ
ನೀರೂ ಸಾಕಷ್ಟಿದೆ
ಹಗ್ಗ ಜೋತುಬಿದ್ದಿದೆ
ಬಳಲಿಬೆಂಡಾದ
ನಾಯಿ
ನೀರಿಗಾಗಿ ಅಲೆದಾಡುತ್ತಿದೆ!

*************


ಹೊಟ್ಟೆಬಿರಿಯುವಂತೆ ತಿಂದು
ಮಧ್ಯಾಹ್ನ ನಿದ್ದೆಗಿಳಿದರೆ
ಘನಘೋರ ಕನಸುಗಳು
ನನ್ನನ್ನೇ ತಿಂದು
ಮುಗಿಸಲು ಹೊರಟಿವೆ
ಕನಸುಗಳಿಗೆ ರಾತ್ರಿ
ಬರಲು ಹೇಳಿದ್ದೇನೆ
ಆಕೆಯ ಕನಸು
ಕಣ್ಣಲ್ಲಿ ತುಂಬಿಕೊಂಡರೆ
ಕಠೋರ ಕನಸುಗಳು
ರಾತ್ರಿ ಬರಲಾರವೇನೋ!

17.12.07

ಒಂದು ಅರಿಕೆ....



ಗುಲಾಬಿ ಮೊಗ್ಗಿನ ಮೇಲೆ
ಮಂಜುಹನಿ
ತೊಟ್ಟಿಕ್ಕುವಾಗ..

ಅದರ ಸುತ್ತ
ದುಂಬಿಯೊಂದು
ಅರಳಲು ಕಾಯುತ್ತ
ಗುಂಯ್‌ಗುಡುವಾಗ
ನನಗೆ ನೀನು ಬೇಕನಿಸುತ್ತದೆ..


ಹಸಿರುಬೇಲಿ ಪಕ್ಕದ
ದಾರಿಯುದ್ದಕ್ಕೆ
ಹೀಗೇ ಸುತ್ತಾಟಕ್ಕೆ
ಇಳಿವಾಗ ಹಾದಿ
ಬದಿಯ ಗುಡಿಸಲಿಂದ
ಹೊರಬಿದ್ದ ನಸುನೀಲಿ
ಹೊಗೆ, ಹಿಮದೊಂದಿಗೆ ಬೆರೆತು
ಮನವನ್ನೂ ಆವರಿಸಿದಾಗ
ಹೃದಯದ ಭಿತ್ತಿಯಲ್ಲಿ
ಮೂಡುವ ಬಿಂಬ ನೀನು..

ಶುಂಠಿ ಚಹಾ
ಕಪ್ಪಿನಲ್ಲಿ ಆರುತ್ತಿದೆ
ಛಳಿ ಮೈಯೊಳಗೆ ಕೊರೆಯುತ್ತ
ಇಳಿದಿರಲು..
ಬಂದುಬಿಡು ಹೀಗೇ ನನ್ನೊಳಗೆ
ಆವರಿಸಿಬಿಡು
ಮನದ ಮೂಲೆಯ
ನಮ್ಮ ಕನಸಗೂಡೊಳಗೆ....
ಚಿತ್ರ ಇಂಟರ್‌ನೆಟ್‌ ಕೃಪೆ

14.12.07

ಬಸ್, ರೇಡಿಯೋ ಹಾಗೂ ಕನ್ನಡ....

ಮಂಗಳೂರಿನ ಸಿಟಿ ಬಸ್‌ ಒಂದರಲ್ಲಿ ಪ್ರಯಾಣ ಮಾಡುವ ಯೋಗ ಇತ್ತೀಚೆಗೆ ಸಿಕ್ಕಿತು. ಕಚೇರಿಯಿಂದ ರಾತ್ರಿ ಮನೆಗೆ ಬರುತ್ತಿದ್ದೆ.
ಒಳಗೆ ಕಾಲಿಡುತ್ತಿದ್ದರೆ ಸೀಟೆಲ್ಲೂ ಕಾಣಲಿಲ್ಲ...ಆದರೆ ಸಾಕಷ್ಟು ಗಟ್ಟಿಯಾಗೇ ಸ್ಪೀಕರ್‍ನಲ್ಲಿ ಹಾಡು..ಅಣ್ಣಾವ್ರ ದನಿ...ಬೊಂಬೆಯಾಟವಯ್ಯಾ...ಇದು ಬೊಂಬೆಯಾಟವಯ್ಯಾ....

ಅರೆ ಏನಾಯ್ತು ಈ ಸಿಟಿ ಬಸ್‌ನವರಿಗೆ ಎಂದುಕೊಂಡೆ. ಯಾಕೆಂದರೆ ಯಾವಾಗಲೂ ಸಿಡಿ ಸಂಗೀತ ಅದರಲ್ಲೂ ಹೆಚ್ಚಾಗಿ ಹಿಂದಿ ಗೀತೆಗಳು ಅದರಲ್ಲೂ ಅಬ್ಬರದ ಸಂಗೀತವನ್ನೇ ಹಾಕಿಕೊಂಡು ಪ್ರಯಾಣಿಕರಿಗೆ ಶಿಕ್ಷೆ ಕೊಡುವ ಇವರಿಗೆ ಇಂದೇನಾಯಿತು ಅನ್ನೋದೇ ನಂಗೆ ಅಚ್ಚರಿ.

ಹಾಡು ಮುಗೀತು...ನೋಡಿದರೆ ಅದು ಎಫ್ ಎಂ ಮಿರ್ಚಿ ರೇಡಿಯೋ. ಮೂರು ವರ್ಷ ಮೊದಲೇ ಮಂಗಳೂರು ಆಕಾಶವಾಣಿ ಎಫ್ ಎಂ ಆಗಿದ್ದರೂ ಎಫ್‌ಎಂ ಇಲ್ಲಿ ಉಂಟಾ, ಹಾಗಾದ್ರೆ ಹೊಸ ಸಿನಿಮಾ ಗೀತೆ ಯಾಕಿಲ್ಲ ಎಂದು ಪ್ರಶ್ನೆ ಹಾಕುತ್ತಿದ್ದವರೇ ಜಾಸ್ತಿ. ಬಸ್‌ನವರು, ಅಂಗಡಿಯವರು, ರಿಕ್ಷಾ ಚಾಲಕರು, ಹೋಟೆಲ್‌ ಮಾಲಕರು, ಪೆಟ್ರೋಲ್ ಬಂಕ್‌ನವರು ಎಲ್ಲರೂ ಈಗ ಎಫ್ ಎಂ ಹಚ್ಚಿಕೊಂಡಿದ್ದಾರೆ ಬೆಂಗಳೂರಿನವರಂತೆ. ಮೊನ್ನೆ ಮೊನ್ನೆ ಎಂದರೆ ನವಂಬರ್‍ ಕೊನೆಯ ವಾರದಲ್ಲಿ ರೇಡಿಯೋ ಮಿರ್ಚಿ ಕುಡ್ಲದಲ್ಲಿ ಗುನುಗುಟ್ಟಿದರೆ, ಒಂದು ವಾರದಲ್ಲಿ ಬಿಗ್ ಎಫ್‌ಎಂ ಕೂಡಾ ಬಂದಿದೆ. ಇನ್ನೂ ಎರಡು ಸ್ಟೇಷನ್‌ಗಳು ಬರಲಿವೆ ಎಂಬ ಮಾಹಿತಿಯೂ ಇದೆ.

ಅದೇನೆ ಇರಲಿ ಬಸ್‌ನಲ್ಲಿ ಬರುತ್ತಿದ್ದ ನನಗೆ ಬಸ್‌ನವರ ಬದಲಾದ ಧೋರಣೆ ನೋಡಿ ತುಸು ವಿಚಿತ್ರ ಎನಿಸಿತು. ರೇಡಿಯೋದಲ್ಲೊಂದು ಜಿಂಗಲ್ ಬಂತು. ಪಜಿ ಮುಂಚಿ ಖಾರ ಜಾಸ್ತಿ, ರೇಡಿಯೊ ಮಿರ್ಚಿ ಕೇಂಡ ದಾಲ ಬೋಚಿ!(ಹಸಿ ಮೆಣಸು ಖಾರ ಹೆಚ್ಚು, ರೇಡಿಯೊ ಮಿರ್ಚಿ ಕೇಳಿದ್ರೆ ಬೇರೇನೂ ಬೇಡ.). ಬಸ್‌ನ ಚಾಲಕ ಸೇರಿದ ಹಾಗೆ ಮುಂದಿನ ಸೀಟ್ನಲ್ಲಿದ್ದ ನಾಲ್ವರು ಯುವಕರು ಜೋರಾಗಿ ನಕ್ಕರೆ, ಮಧ್ಯೆ ಸೀಟನಲ್ಲಿದ್ದ ಮಧ್ಯವಯಸ್ಕ ಮುಸುಮುಸು ನಕ್ಕ.

ರೇಡಿಯೋ ಮಿರ್ಚಿಯಲ್ಲಿ ಮಿತ್ರ, ಆರ್‌ಜೆ ಅಜೇಯ ಸಿಂಹನ ಗ್ರಾಮೊಫೋನ್‌ ಕಾರ್ಯಕ್ರಮದಲ್ಲಿ ಆತನ ಗಂಭೀರ ಕಂಠದ ನಿರೂಪಣೆ ಇಷ್ಟವಾಗುವಂತಿತ್ತು. ಮತ್ತೆ ಕೇಳಿದ್ದು ಆಪ್ತವಾಗುವ ಸ್ವರ ಎಸ್‌ ಜಾನಕಿಯದ್ದು. ಬಸ್‌ನ ಅನೇಕ ಪ್ರಯಾಣಿಕರು ತಾಳ ಹಾಕುತ್ತಿದ್ದರು.

ನಿಜ. ನಮಗೆ ಹೊಸದೇ ಆಗಬೇಕು ಎಂದೇನಿಲ್ಲ. ಕೇವಲ ಅಬ್ಬರ, ಅತಿ ಉತ್ಸಾಹಗಳೆಲ್ಲಾ ಅನೇಕ ಬಾರಿ ತೋರಿಕೆಯದ್ದೇ ಆಗಿರುತ್ತದೆ. ಇಂಪಾದ,ಎವರ್ ಗ್ರೀನ್ ಹಾಡುಗಳಿಗೆ ಕೇಳುವ ಕಿವಿಗಳು ಎಂದೂ ಇರುತ್ತವೆ. ಕೊಡುವ ವಿಧಾನದಲ್ಲಿ ಒಂದಿಷ್ಟು ಹೊಸತನ, ಇದು ನಮ್ಮದು ಎನ್ನುವ ಆಪ್ತತೆ ಕೊಡಬಲ್ಲದು.

ಆರ್‍ಜೆಗಳ ಹೊಸತನದ ನಿರೂಪಣೆ, ಹೆಚ್ಚು ತಲೆಸಿಡಿಸದೆ, ಕೂಡಲೇ ಹಾಡು ಪ್ರಸ್ತುತ ಪಡಿಸುವ ವಿಧಾನ ಕೇಳುಗರನ್ನು ಹಿಡಿದಿಡಬಲ್ಲದು. ಆಕಾಶವಾಣಿ ಇನ್ನೂ ಸಾಂಪ್ರದಾಯಿಕತೆ ಬಿಡದಿರುವುದು ಅದನ್ನು ಈಗಿನವರ ಹತ್ತಿರ ಕರೆದೊಯ್ಯಲು ಕಷ್ಟವಾಗಬಹುದೇನೋ. ಆದರೂ ಮಾಹಿತಿ, ವಾರ್ತೆ ನೀಡಬಲ್ಲ ಏಕಮೇವತೆ ಆಕಾಶವಾಣಿಗೆ ಬೇಡಿಕೆಯನ್ನು ಇನ್ನೂ ಉಳಿಸಿಕೊಡಬಲ್ಲದು.

ಮಿರ್ಚಿ ತನ್ನ ಲವಲವಿಕೆಯಿಂದ ಮನಸೆಳೆದರೆ, ಬಿಗ್ ಎಫ್‌ ಎಂ ಆಧುನಿಕತೆಗೆ ಒಂದಷ್ಟು ಸಾಂಪ್ರದಾಯಿಕತೆ, ‘ಲವ್‌ ಮಾಡಿನೋಡು’ ಮುಂತಾದ ಭಾವುಕತೆ ಲೇಪ ತುಂಬಿದ ಕಾರ್ಯಕ್ರಮಗಳ ಮೂಲಕ ಹೃದಯಕ್ಕೆ ಹತ್ತಿರವಾಗುತ್ತಿದೆ.

ವಿಶೇಷ ಎಂದರೆ ಈ ಬಾರಿ ಕನ್ನಡ ಹಾಡುಗಳೇ ಎಲ್ಲೆಡೆ ಮಿಂಚುತ್ತಿವೆ. ಮುಂಗಾರು ಮಳೆ ಭೋರ್ಗರೆದ ಬಳಿಕ ಸಾಲು ಸಾಲಾಗಿ ಅರ್ಥಪೂರ್ಣ ಸಾಹಿತ್ಯ, ಇಂಪಾದ ಸಂಗೀತ ಕನ್ನಡಕ್ಕೀಗ ಆಕರ್ಷಣೆ ಕೊಟ್ಟಿದೆ, ಯು ನೋ ಕನ್ನಡ ಸಾಂಗ್ಸ್ ಆರ್‍ ಮೆಲೋಡಿಯಸ್ ಎಂದು ನಮ್ಮ ಆಂಗ್ಲ ಕನ್ನಡಿಗರೂ ಹೇಳತೊಡಗಿದ್ದಾರೆ.

ಈಗ ರೇಡಿಯೋದ ಮೂಲಕ ನಮ್ಮ ಎವರ್‍ ಗ್ರೀನ್ ಗೀತೆಗಳು, ಹೊಸ, ಭರವಸೆಯ ಹಾಡುಗಳೂ ಹರಿದು ಬರಲಿ. ಕನ್ನಡ ಉಳಿಯುವುದು ಮಾತ್ರವಲ್ಲ ಭರವಸೆಯ ಪ್ರಗತಿಸಾಧಿಸಲಿ...ನೀವೇನಂತೀರಿ?

11.12.07

ತನೋಟಿ ದೇವಿಗೆ ಯೋಧನೇ ಅರ್ಚಕ!


ರಾಜಸ್ತಾನದ ಜೈಸಲ್ಮೇರ್‍ನಲ್ಲಿರುವ ತನೋಟ್ ಮಂದಿರ ಅನೇಕ ಕಾರಣಗಳಿಂದ ಪ್ರಸಿದ್ಧಿ ಹೊಂದಿದೆ.
ಭಾರತ-ಪಾಕಿಸ್ತಾನದ ಗಡಿಭಾಗದಲ್ಲಿರುವ ಈ ಮಂದಿರ ಭಾರತೀಯ ಗಡಿಭದ್ರತಾ ಪಡೆಯವರಿಗೆ ಅತ್ಯಂತ ಪೂಜನೀಯ. ಇದೇ ಕಾರಣಕ್ಕಾಗಿ ಈ ಮಂದಿರದ ನಿರ್ವಹಣೆಯನ್ನೂ ಬಿಎಸ್‌ಎಫ್‌ನ ಬೆಟಾಲಿಯನ್ ನೋಡಿಕೊಳ್ಳುತ್ತದೆ. ಬಿಎಸ್‌ಎಫ್‌ ಅಧಿಕಾರಿ, ಜವಾನರ ಒಂದು ಟ್ರಸ್ಟ್ ನಿರ್ಮಿಸಿ ಉಸ್ತುವಾರಿಯನ್ನು ಅದಕ್ಕೆ ವಹಿಸಲಾಗಿದೆ. ಮಂದಿರದ ತೆಕ್ಕೆಯಲ್ಲೇ ಬಿಎಸ್‌ಎಫ್‌ ನೆಲೆ ಕೂಡಾ ಇದೆ.
ಎಲ್ಲಕ್ಕಿಂತ ಅಚ್ಚರಿ ಎಂದರೆ ಈ ಮಂದಿರದ ಪೂಜಾರಿ ಕೂಡಾ ಬಿಎಸ್‌ಎಫ್ ಜವಾನನೇ. ಶಾಂತಿ ಇರುವಾಗ ಇಲ್ಲಿನ ತನೋಟ್‌ ದೇವಿಗೆ ಭಕ್ತಿಯಿಂದ ಆರತಿ ಮಾಡುವ ಈ ಯೋಧ ಯುದ್ಧ ಕಾಲದಲ್ಲಿ ಗನ್ ಹಿಡಿಯಲೂ ಸಿದ್ಧ!



ಈ ಮಂದಿರಕ್ಕೆ ಸಂಬಂಧಿಸಿ ಇಲ್ಲಿನವರ ನಂಬಿಕೆಯೊಂದಿದೆ. ೧೯೬೫ರ ಭಾರತ-ಪಾಕ್ ಯುದ್ಧದಲ್ಲಿ ಈ ಮಂದಿರವನ್ನು ಪಾಕ್‌ ಆರ್ಟಿಲ್ಲರಿ ಸುತ್ತುವರಿದಿತ್ತು. ಆಗ ಭಾರತದ ಸೈನಿಕರ ಸಂಖ್ಯೆಯೂ ಕಡಮೆ ಇತ್ತು. ಆದರೆ ತನೋಟ್ ಮಂದಿರ ಒಡೆಯಲು ಪಾಕ್ ಹಾಕಿದ್ದ ಆರ್ಟಿಲ್ಲರಿ ಶೆಲ್‌ಗಳು ಸ್ಫೋಟಿಸಲಿಲ್ಲ(ಸ್ಫೋಟಿಸದ ಶೆಲ್‌ಗಳನ್ನು ಇಲ್ಲಿ ತೆಗೆದು ಪ್ರದರ್ಶನಕ್ಕೆ ಇರಿಸಲಾಗಿದೆ), ಮತ್ತು ಅಂತಿಮವಾಗಿ ಭಾರತದ ಕೈ ಮೇಲಾಯ್ತು. ಈ ಕಾರಣಕ್ಕಾಗಿಯೇ ಬಿಎಸ್‌ಎಫ್‌ ಮಂದಿಗೆ ಮಾತ್ರವಲ್ಲ ಇಡೀ ಜೈಸಲ್ಮೇರ್‍ಗೆ ತನೋಟಿ ಮಾ ಎಂದರೆ ಜೀವ.



ಜೈಸಲ್ಮೇರ್‌ನಿಂದ ೧೨೫ ಕಿ.ಮೀ ದೂರದಲ್ಲಿರುವ ಈ ಮಂದಿರಕ್ಕೆ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬಾರ್ಡರ್‍ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿರುವ ನೇರ ರಸ್ತೆಯಲ್ಲಿ ೧.೫ ಗಂಟೆಯಲ್ಲಿ ಜೀಪ್‌, ಸುಮೋಗಳಲ್ಲಿ ತಲಪಬಹುದು. ಸುಡುವ ಮರಳಿನ ನಡುವೆ ಇರುವ ಈ ಮಂದಿರ ಬಿಎಸ್‌ನವರಿಗೆ ಓಯಸಿಸ್!

6.12.07

ಮರುಳುಗೊಳಿಸುವ ಮರಳುಗಾಡು(a trek to thar desert)


ಜೈಸಲ್ಮೇರ್‍ ಪಟ್ಟಣಕ್ಕೆ ಅದರದ್ದೇ ಆದ ಗಾಂಭೀರ್ಯ, ಸೊಗಸು ಕೊಡುವ ಗೋಲ್ಡನ್ ಮಾರ್ಬಲ್, ಅಲ್ಲಿನ ಕೋಟೆ, ಪೇಟೆಯ ಮೋಲೆಗಳಲ್ಲಿ ಇರುವ ಅಗಲ ಕಟಾರದ ತುಂಬ ಕುದಿಯುತ್ತಲೇ ಇರುವ ದಪ್ಪನೆ ಹಾಲು..ಸಾಲು ಸಾಲಾಗಿ ನಡೆವ ಒಂಟೆ ಗಡಣ...ಇವೆಲ್ಲ ಈಗ ಮತ್ತೆ ಕಣ್ಣಮುಂದೆ ಸಾಲುಸಾಲು ಮೆರವಣಿಗೆ ನಡೆಸುತ್ತಿವೆ....
ಕಳೆದ ಕೆಲದಿನಗಳ ಹಿಂದೆಯಷ್ಟೇ ಜೈಸಲ್ಮೇರ್‍ನ ಥಾರ್‍ ಮರುಭೂಮಿ ಚಾರಣ ಮಾಡಿಮುಗಿಸಿದ ಬಳಿಕ ಮರುಭೂಮಿಯಲ್ಲೂ ಎಂಥದೋ ಆಕರ್ಷಣೆ ಕಾಡುತ್ತದೆ....


ಸ್ಥಳೀಯ ಚಾರಣಗಳ ಸವಿ ಸಾಕಷ್ಟು ಅನುಭವಿಸಿದ ನನಗೆ ಯಾವುದಾದರೊಂದು ರಾಷ್ಟ್ರೀಯ ಮಟ್ಟದ ಚಾರಣದಲ್ಲಿ ಪಾಲ್ಗೊಳ್ಳಬೇಕು ಎಂಬ ಬಯಕೆ ಅನೇಕ ದಿನಗಳಿಂದ ಕಾಡುತ್ತಿತ್ತು. ಯೂತ್ ಹಾಸ್ಟೆಲ್‌ನವರು ೫ ವರ್ಷದ ನಂತರ desert trek ಸಂಘಟಿಸುತ್ತಿದ್ದಾರೆ, ಸೇರಲು ಪ್ರಯತ್ನ ಮಾಡೋಣ ಎಂದು ಸ್ನೇಹಿತ ಗಣಪತಿ ಹೇಳಿದ ಕೂಡಲೇ ಯೆಸ್ ಎಂದು ಬಿಟ್ಟೆ.

ಮಂಗಳೂರು ಯೂತ್‌ ಹಾಸ್ಟೆಲ್‌ನ ಇತರ ಗೆಳೆಯರಾದ ಪ್ರವೀಣ್, ಸುನಿಲ್ ಮತ್ತು ಸುಧೀರ್‍ ಸೇರಿಸಿಕೊಂಡು ದೂರದ ರಾಜಸ್ತಾನದ ಮರುಭೂಮಿಗೆ ಹೋಗುವುದೇ ಎಂದು ನಿರ್ಧರಿಸಿಬಿಟ್ಟೆವು.


ನವೆಂಬರ್‍ ೧೨ರಂದು ಕೊರೆಯುವ ಚಳಿಯಲ್ಲಿ ಹಲ್ಲು ಕಟಕಟಿಸುತ್ತಾ ಜೈಸಲ್ಮೇರ್‍ ಸ್ಟೇಷನ್‌ನಲ್ಲಿ ಇಳಿದೆವು ರೈಲಿಂದ. ಅಲ್ಲೇ ಚಹಾ ಮುಗಿಸಿ ಟ್ಯಾಕ್ಸಿಯೊಂದನ್ನು ಗೊತ್ತು ಮಾಡಿ ತನೋಟ್ ದೇಗುಲ ನೋಡಲು ಹೊರಟೆವು (ಭಾರತ-ಪಾಕ್ ಗಡಿಯಲ್ಲಿರುವ ಈ ಗುಡಿಯ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ).

ತನೋಟ್ ಮುಗಿಸಿ ಜೈಸಲ್ಮೇರ್‌ನ ಬಾರ್ಡರ್‍ ಹೋಂ ಗಾರ್ಡ್ ಮೈದಾನ ಸೇರಿದೆವು. ಅದು ನಮ್ಮ ಬೇಸ್ ಕ್ಯಾಂಪ್. ಆಗಲೇ ಬಂದು ಒಂದು ದಿನವಾಗಿದ್ದ ಚಾರಣದ ಮೊದಲ ತಂಡದವರು ಹೊರಡುವ ತಯಾರಿಯಲ್ಲಿದ್ದರು. ನಮ್ಮದು ಎರಡನೇ ತಂಡವಾದ ಕಾರಣ ಮರುದಿನದ ವರೆಗೆ ಸಮಯ ಇತ್ತು ಸುತ್ತಾಟಕ್ಕೆ. ಸುಡು ಬಿಸಿಲಿನಲ್ಲಿ ಬಿಸಿಯೇರಿದ್ದ ಟೆಂಟ್‌ಗಳು ನಮ್ಮನ್ನು ಸ್ವಾಗತಿಸಿದವು. ಆ ದಿನ ಸುತ್ತಾಟದಲ್ಲೆ ಮುಗಿದು ಹೋಯಿತು. ಆ ನಡುವೆ ಮೊದಲ ತಂಡದ ಫ್ಲಾಗ್ ಆಫ್ ಕೂಡಾ ಆಯ್ತು. ಸಂಜೆ ಜೈಸಲ್ಮೇರ್‍ನ ಕೋಟೆಗೊಂದು ಸುತ್ತು ಹಾಕಿದೆವು, ಪೇಟೆಯಲ್ಲಿ ಸಿಗುವ ಕೇಸರಿ, ಬಾದಾಮ್ ಮಿಶ್ರಿತ ಕೆನೆಹಾಲು ರುಚಿ ನೋಡಿದೆವು.



ಮರುದಿನ ನಮ್ಮ ತಂಡಕ್ಕೆ ಫ್ಲಾಗ್ ಆಫ್. ಕ್ಯಾಂಪ್ ನಿರ್ದೇಶಕ ರತನ್ ಸಿಂಗ್ ಭಟ್ಟಿ, ಸಂಚಾಲಕ ಓಂ ಭಾರತಿ ಅವರಿಂದ ಮರುಭೂಮಿಯ ಸ್ಥೂಲ ಪರಿಚಯ, ಚಾರಣಿಗರಿಗೆ ಹಲವಾರು ಸೂಚನೆ.
ಕೊನೆಗೂ ಅಲ್ಲಿಂದ ಹೊರಟ ನಾವು ಬಸ್ ಮೂಲಕ ತಲಪಿದ್ದು ಮೊದಲ ಕ್ಯಾಂಪ್ ಆಗಿರುವ ಸ್ಯಾಂ ಸ್ಯಾಂಡ್ ಡ್ಯೂನ್. ರುಚಿಕಟ್ಟಾದ ಕುಡಿಯುವ ನೀರು ಸಿಕ್ಕಿದ್ದು ಈ ಕ್ಯಾಂಪ್‌ನಲ್ಲಿ ಮಾತ್ರ. ಸ್ಯಾಂ ಎಂದರೆ ಪ್ರವಾಸಿಗರ ಸಂತೆ. ನಾವು ಸೂರ್ಯಾಸ್ತ ನೋಡಲು ಕಡಲ ತಡಿಗೆ ಹೋದಂತೆ ಅಲ್ಲಿನವರು ಸೂರ್ಯಾಸ್ತಕ್ಕೆ ಇಲ್ಲಿನ ಮರಳ ದಿಣ್ಣೆಯೇರಿ ಕುಳಿತು ಬಿಡುತ್ತಾರೆ. ಇಲ್ಲಿ ಒಂಟೆ ಸವಾರಿ ಕೂಡಾ ಫೇಮಸ್ಸೇ.

ತೆಳ್ಳನೆ ಉದ್ದುದ್ದ ಇರುವ ಪಠಾಣ ಊಂಟ್‌ವಾಲಾಗಳು ನಿಮ್ಮ ಮುಖ ನೋಡಿಯೇ ನಿಮ್ಮ ಆಸಕ್ತಿಯನ್ನೆಲ್ಲ ಅಳೆದು, ನಿಮ್ಮ ಅಭಿರುಚಿಗೆ ತಕ್ಕಂತಹ ಹೆಸರನ್ನು ಒಂಟೆಗೆ ಇರಿಸಿ ನಿಮ್ಮನ್ನು ಮರುಳುಗೊಳಿಸುತ್ತಾರೆ, ಇಲ್ಲಿಂದ ಅಲ್ಲಿಗೆ ಒಂಟೆ ಮೇಲೆ ಕುಳಿತು ಒಂದು ರೌಂಡ್ ಹೊಡೆದರೆ ೮೦ ರೂ.ನಿಂದ ೧೦೦ ರೂ. ಬಿಚ್ಚಬೇಕು!

ನಮಗೆ ಮರುದಿನ ೧೪ ಕಿ.ಮೀ ಒಂಟೆ ಸವಾರಿ ಇದ್ದ ಕಾರಣ ಯಾರೂ ಅರ್ಜೆಂಟ್ ಮಾಡಲಿಲ್ಲ. ದಿಣ್ಣೆ ಮೇಲೆ ಸೂರ್ಯಾಸ್ತ ಸವಿದು ವಾಪಸಾದೆವು ಕ್ಯಾಂಪ್‌ಗೆ.

ಮರುದಿನ ನಮ್ಮ ವಾಹನ ಒಂಟೆ. ಮೂರು ಹಂತಗಳಲ್ಲಿ ಎದ್ದು ನಿಲ್ಲುವ ಒಂಟೆಯ ಮೇಲೆ ಕೂರಲೂ ಬ್ಯಾಲೆನ್ಸ್‌ ಬೇಕು! ಕುಳಿತ ಬಳಿಕವೂ ಬೀಜ ನೀರಾಗುವಂತಹ ಅನುಭವ ಅದು! ಅಂತೂ ಅಲ್ಲಿಂದ ಹೊರಟು ೩ ಗಂಟೆ ಪ್ರಯಾಣಿಸಿ ದ ಬಳಿಕ ಸುಸ್ತಾಗಿದ್ದ ನಮ್ಮನ್ನು ಊರೊಂದರ ಗಡಿಯಲ್ಲಿ ಇಳಿಸಿದರು ಊಂಟ್‌ವಾಲಾಗಳು. ಅಲ್ಲಿಂದ ನಡು ಮಧ್ಯಾಹ್ನ ನಡೆಯುತ್ತಾ ನೀಮಾ ಎಂಬ ಗ್ರಾಮ ದಾಟಿ ಬೀಡಾ ಎಂಬ ಗ್ರಾಮದ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟ ಮುಗಿಸಿದೆವು(ಪ್ಯಾಕ್ ಲಂಚ್).

ಅಲ್ಲಿಂದ ಮತ್ತೆ ಒಂದು ಘಂಟೆ ರಸ್ತೆಯಲ್ಲಿ ಪಯಣ. ಕೊನೆಗೂ ಎರಡನೇ ಕ್ಯಾಂಪ್‌ ಬೀಡಾ ಬಂತು. ಮರಳಿನಲ್ಲಿ ಅರ್ಧ ಹೂತಿಟ್ಟ ಮಣ್ಣಿನ ಕೊಡ ತುಂಬ ಅರೆ ಉಪ್ಪಾದರೂ ತಂಪಾಗಿದ್ದ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡೆವು. ಸ್ಯಾಂಗೆ ಹೋಲಿಸಿದರೆ ಬೀಡಾದ ಮರಳು ದಿಣ್ಣೆಗಳು ಹೆಚ್ಚು ಆಕರ್ಷಕ, ಕಸವೇ ಇಲ್ಲದೆ ಶುಭ್ರ.. ಯಾಕೆಂದರೆ ಇಲ್ಲಿಗೆ ಪ್ರವಾಸಿಗರು ಬರುವುದಿಲ್ಲ. ಚಾರಣಿಗರು ಮಾತ್ರ!

ಅಲ್ಲಿಂದ ಮರುದಿನ ಮತ್ತೆ ಮುಂದಿನ ಪಯಣ ಶುರು, ಇಲ್ಲಿಂದ ಮುಂದಕ್ಕೆ ನಮ್ಮ ಗೈಡ್ ಪೂನಂ ಸಿಂಗ್, ಜತೆಗೆ ಆತನ ಒಂಟೆ ಗಾಡಿ. ನಮ್ಮಲ್ಲಿನ ೬೦ ಮಂದಿಯ ತಂಡದಲ್ಲಿದ್ದ ಅನೇಕ ಸೋಮಾರಿಗಳು, ಪೂನಂ ಸಿಂಗ್‌ಗೆ ಲಂಚದ ಆಮಿಷ ಒಡ್ಡಿ, ತಮ್ಮ ಬ್ಯಾಗ್‌ಗಳನ್ನು ಗಾಡಿಗೆ ಹೇರಿ ಮುಂದಿನ ಮೂರೂ ದಿನ ನಿರುಮ್ಮಳರಾಗಿದ್ದರು. ಒಬ್ಬನಂತೂ, ನಡೆಯುವ ಗೋಜಿಗೂ ಹೋಗದೆ ಗಾಡಿಯಲ್ಲೇ ಕುಳಿತು ನಗುತ್ತಿದ್ದ(ಇವರಿಗೆ ಚಾರಣವಾದರೂ ಯಾಕಾಗಿ?).

೧೪ ಕಿ.ಮೀ ಮರುಭೂಮಿ ನಡಿಗೆಯ ಬಳಿಕ ಸೇರಿದ್ದು ಹತ್ತಾರ್‍ ಎಂಬ ಹಳ್ಳಿಯ ಸೆರಗಿನಲ್ಲಿದ್ದ ಕ್ಯಾಂಪ್. ಕುಮಾರ ಪರ್ವತ, ಕುದುರೆಮುಖದಂತಹ ಚಾರಣ ಮಾಡಿದವರಿಗೆ ಮರುಭೂಮಿಯ ಚಾರಣ ತ್ರಾಸ ಕೊಡುವುದಿಲ್ಲ, ಏನಿದ್ದರೂ ಬಿಸಿಲು ತಾಳಿಕೊಳ್ಳುವ ಸಾಮರ್ಥ್ಯ ಇದ್ದರಾಯಿತು ಅಷ್ಟೇ. ಹತ್ತಾರ್‍ ಕ್ಯಾಂಪ್‌ನ ವೆಲ್‌ಕಂ ಡ್ರಿಂಕ್‌ ನಂತರ ಕೆಲವರು ಕ್ರಿಕೆಟ್ ಆಡಲು ಶುರುವಿಟ್ಟರೆ, ನಾವು ಕೆಲವರು ಗೆಳೆಯರು ಕೆಲವೇ ಫರ್ಲಾಂಗ್‌ ದೂರದಲ್ಲಿ ಕಾಣುತ್ತಿದ್ದ ಮರಳಿನ ಗುಡ್ಡದ ಕಡೆಗೆ ಹೆಜ್ಜೆ ಹಾಕಿದೆವು. ಅಲ್ಲಿ ಕುರುಚಲು ಗಿಡಗಳು ಸಾಕಷ್ಟಿದ್ದವು. ಸುನಿಲ್ ಸುಧೀರ್‍ ಕ್ಯಾಮೆರಾ ಹಿಡಿದು ಓಡುತ್ತಿದ್ದರು, ನೋಡಿದರೆ ಕೃಷ್ಣಮೃಗವೊಂದು ಛಂಗನೆ ಜಿಗಿಯುತ್ತಾ ಓಡಿ ಮರೆಯಾಯಿತು. ಮರುಭೂಮಿಯಲ್ಲೂ ಹರಿಣಗಳು, ಮರಳು ನರಿಗಳು, ಮೊಲ, ನವಿಲು...ಹೀಗೆ ವಿವಿಧ ಪ್ರಾಣಿ ಪಕ್ಷಿಗಳಿವೆ. ಅವುಗಳ ರಕ್ಷಣೆಗಾಗಿ ರಾಜಸ್ತಾನ ಸರ್ಕಾರ ಥಾರ್‍ ಮರುಭೂಮಿಯ ಕೆಲಭಾಗಗಳನ್ನು ರಾಷ್ಟ್ರೀಯ ಉದ್ಯಾನವಾಗಿ ಘೋಷಿಸಿದೆ.

ಮುಂದಿನ ಕ್ಯಾಂಪ್‌ನಲ್ಲಿ ಸ್ನಾನ ಮಾಡಲು ಅವಕಾಶ ಇದೆ ಎಂದು ಕ್ಯಾಂಪ್ ಲೀಡರ್‍ ಹೇಳಿದ್ದು ನಮ್ಮ ಉತ್ಸಾಹ ಹೆಚ್ಚಿಸಿತು. ಯಾಕೆಂದರೆ ಕಳೆದ ಮೂರು ದಿನಗಳಿಂದ ಸ್ನಾನಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ಮುಂದಿನ ಕ್ಯಾಂಪ್‌ ಧನೇಲಿಗೆ ವೇಗವಾಗಿ ಹೆಜ್ಜೆ ಹಾಕಿದೆವು. ನಾವು ನಡೆದ ಸ್ಥಳಗಳಲ್ಲೇ ಈ ಭಾಗ ಸ್ವಲ್ಪ ಕ್ಲಿಷ್ಟಕರ. ಮೊದಲ ಕ್ಯಾಂಪ್‌ಗಳಿಗೆ ಬರುವಾಗ ದಾರಿಯಲ್ಲಿ ಬೈರಿ, ಖೈರ್‍, ಮುಂತಾದ ವೃಕ್ಷಗಳು ಸಿಗುತ್ತಿದ್ದವು, ಆದರೆ, ಈ ಭಾಗದಲ್ಲಿ ಮರಗಳೆ ಇಲ್ಲ, ಕಳ್ಳಿ ಮಾತ್ರ. ಅಂತೂ ಧನೇಲಿ ತಲಪಿ, ಅಲ್ಲಿನ ಬೋರ್‌ವೆಲ್‌ನ ಉಪ್ಪು ನೀರಿನಲ್ಲಿ ಸ್ನಾನ ಮುಗಿಸಿ ಆದಾಗ, ತಂಡದ ಮಹಿಳೆಯರೂ, ವಯಸ್ಕರೂ ಏದುಸಿರು ಬಿಡುತ್ತಾ ಬರುತ್ತಿದ್ದರು.


ಇನ್ನೊಂದೇ ದಿನ...ಕೊನೆಯ ಕ್ಯಾಂಪ್‌ ಬರ್ಣಾ. ಧನೇಲಿಯ ಹಳ್ಳಯ ಹೈಕಳು, ಅಲ್ಲಿನ ಮಜ್ಜಿಗೆ, ತುಪ್ಪ ತಂದು ಮಾರುತ್ತಿದ್ದರು. ತಂಡದ ಅನೇಕರಿಗೆ ಮನೆಯ ನೆನಪಾಯ್ತೋ ಏನೋ ಮಜ್ಜಿಗೆ ಸರಾಗ ಹೊಟ್ಟೆಗೆ ಇಳಿಸುತ್ತಿದ್ದರು. ಅಲ್ಲಿನ ಹಳ್ಳಿಗಳ ವಿಭಿನ್ನ ರೀತಿಯ ಮಣ್ಣಿನ ಮನೆಗಳು...ದೇಸೀ ಗೋವುಗಳು, ಕುರಿಗಳ ಮಂದೆ ನೋಡುತ್ತಾ ಮುಂದುವರಿದೆವು. ಬರ್ಣಾಕ್ಕೆ ಹೋಗುವ ದಾರಿಯೂ ಸ್ವಲ್ಪ ಕಷ್ಟಕರ. ಮಧ್ಯಾಹ್ನ ೧೨ರ ನಂತರ ಕಠಿಣವಾಗುವ ಬಿಸಿಲೇ ಇಲ್ಲಿ ಶತ್ರು ಅನೇಕರಿಗೆ. ಕೆಲವರಿಗೆ ನೀರು ಕುಡಿದಷ್ಟು ಸಾಲದು. ಅದೂ ಉಪ್ಪುಪ್ಪು ನೀರು....

ಅಂತು ಬಂತು ಬರ್ಣಾ. ಇದೂ ಪ್ರವಾಸಿ ಸ್ಥಳ, ಹಾಗಾಗಿ ಮೇಲ್ಭಾಗದ ಮರಳ ದಿಣ್ಣೆಗಳಲ್ಲಿ ಪ್ರವಾಸಿಗರು ಸಾಕಷ್ಟು ಬರುತ್ತಿರುತ್ತಾರೆ. ಈ ಹಳ್ಳಿಯ ವಿಶೇಷ ಖಾದ್ಯ ದಾಲ್ ಭಾಟಿ ಚೂರ್ಮಾ. ಗೋಧಿ, ತುಪ್ಪ, ಸಕ್ಕರೆ ಬಳಸಿ ಮಾಡುವ ಈ ಖಾದ್ಯ ಜನಪ್ರಿಯ, ನಮ್ಮ ರಾತ್ರಿಯ ಊಟಕ್ಕೂ ಅದೇ.

ಮರುದಿನ ನಮ್ಮನ್ನು ಬೇಸ್ ಕ್ಯಾಂಪ್‌ಗೆ ಕರೆದೊಯ್ಯಲು ಬಸ್ ಸಿದ್ಧವಾಗಿತ್ತು. ಕೊನೆಯ ಕ್ಯಾಂಪ್ ಆದ್ದರಿಂದ ಸಾಕಷ್ಟು ಗ್ರೂಪ್ ಫೋಟೋ ತೆಗೆದೆವು. ಕೈಲಿದ್ದ ಬಾಟಲಿ ತುಂಬ ಅಲ್ಲಿನ ನಯವಾದ ಮರಳು ತುಂಬಿಕೊಂಡು, ಬ್ಯಾಗೇರಿಸಿ, ಬರ್ಣಾದ ಕೆಂಚುಗೂದಲಿನ ಮಕ್ಕಳ ನಗುವನ್ನು ಮನಸ್ಸಲ್ಲಿ ಹಿಡಿದಿರಿಸಿ ಮರಳಿದ್ದು ಬೇಸ್‌ಕ್ಯಾಂಪ್‌ಗೆ.

ರಾತ್ರಿಯಾದರೆ ಮರಗಟ್ಟಿಸುವ ಛಳಿ, ಹಗಲು ಕೆಂಡದಂಥ ಬಿಸಿಲು, ಹೀಗೆ ಇಲ್ಲಿನ ವಿಪರೀತ ಹವಾಗುಣದಲ್ಲಿ ಬದುಕುವ ಜನ ಕಷ್ಟಜೀವಿಗಳು. ಅತಿಥಿಗಳನ್ನು ದೇವರಂತೆ ನೋಡಿಕೊಳ್ಳುವವರು. ಮರಳನ್ನೂ ಪ್ರೇಮಿಸುವವರು...ಅತಿಥಿಗಳನ್ನು ಆಹ್ವಾನಿಸುವ ರಾಜಸ್ತಾನಿ ಪದ್ಯವೊಂದರ ಸಾಲು ಹೀಗೆ ಸಾಗುತ್ತದೆ...

ಕೇಸರಿಯಾ ಪಾಲಮ್‌...ಆವೋಜೀ

ಪಧಾರೋ ಮಾರೇ ದೇಸ್‌ ಮೇ......

ಚಿತ್ರಗಳು:ಸುಧೀರ್‍/ವೇಣುವಿನೋದ್
Related Posts Plugin for WordPress, Blogger...