25.3.09

ಒಂದಷ್ಟು ಅರಿಕೆ...

ನಿನ್ನ ಖುಷಿಯ

ಅಲೆಗಳಲ್ಲಿ ನನ್ನ ನೋವುಗಳೆಲ್ಲ

ಕೊಚ್ಚಿಕೊಂಡು ಹೋಗಲಿ

ನಿನ್ನ ನಾಳೆಗಳಲ್ಲಿ

ನನ್ನ ಇಂದು

ಪಿಳಿ ಪಿಳಿ

ಕಣ್ಣು ಬಿಡಲಿ

ಕ್ಷಣಕ್ಷಣಕ್ಕೂ ಬದಲಾಗುವ

ನಿನ್ನ ಮಾತಿನ ಮೋಡಿಯಲ್ಲಿ

ಸಿಲುಕಿದ ನನ್ನ ಹಾಡುಗಳೆಂದಿಗೂ

ಮಾಧುರ್ಯ ಕಳೆದುಕೊಳ್ಳದಿರಲಿ

ದಿನರಾತ್ರಿ ಕನಸುಕಾಣುವ

ನಿನ್ನ ಕಂಗಳ ರೆಪ್ಪೆಗಳು

ನನ್ನೆದೆಯ ಕ್ಯಾನ್ವಾಸಲ್ಲಿ

ಚಿತ್ತಾರ ಬರೆಯಲಿ..

ನಮ್ಮ ಅಗಲುವಿಕೆಯ

ಬೇಗುದಿಯೆ ಈ ಛಳಿಗೆ

ಹೊದಿಕೆಯಾಗಲಿ..

10.3.09

ನಿನ್ನೆ ನಾಳೆಗಳು....

ಮೊನ್ನೆ, ನಿನ್ನೆ ನನಗೆ ಚೆನ್ನಾಗಿತ್ತು

ಇಂದೂ ಇಲ್ಲಿಯ ವರೆಗೆ

ಪರವಾಗಿಲ್ಲ...

ಅಂದಹಾಗೆ

ಬದುಕು ಬೇವು ಬೆಲ್ಲ,

ಕಷ್ಟ ಸುಖಗಳೆ ಎಲ್ಲ

ಎಂದಿದ್ದಾರೆ ಹಿರಿಯರು

ಮೊನ್ನೆ, ನಿನ್ನೆ, ಇಂದು ಚೆನ್ನಾಗಿದೆ ನನಗೆ

ಅದಕ್ಕೇ ಭಯವಾಗುತ್ತಿದೆ...

ನಾಳೆಯ ನೆನೆದು ಮನ ಅಳುಕುತ್ತದೆ

-------------------------------

ಆಶಾವಾದಿಯೊಬ್ಬ

ನಾಳೆಗಳನ್ನು ಕೈವಶ

ಮಾಡುತ್ತಲೇ ಹೋದ

ಆತನ ಅಕೌಂಟಿನಲ್ಲಿದ್ದ

ನೋವುಗಳಿಗೆ

ಅನುಭವದ ಹಾಗೂ

ನಲಿವುಗಳಿಗೆ

ಸಂಭ್ರಮದ ಬಡ್ಡಿ ಸಿಕ್ಕಿತು..

ನಿರಾಶಾವಾದಿ ನಾಳೆಯ

ನೆನಪುಗಳಿಗೆ ಸೊರಗಿ

ವಿಗ್ರಹವಾಗಿದ್ದಾನೆ!

------------------------

ನಾಳೆಯಾಗಲು

ಕೆಲ ಗಂಟೆಗಳಿವೆ

ನಿನ್ನೆಯ ಹೊಸ್ತಿಲು ದಾಟಿಯಾಗಿದೆ

ಆ.......

ದೂರದಲ್ಲಿ ಕಾಣುವದೇನು

ಶುಭ್ರಸೂರ್ಯನ ಬಿಂಬವೋ

ನಮ್ಮ ಸುಡುವ ಬಾಂಬೋ!

1.3.09

ನಾವೆಲ್ಲರೂ ಕರಿ ಮಂಗಗಳೇ !!!

ನಮ್ಮೆಲ್ಲರೊಳಗೆ 'ಕಾಲಾ ಬಂದರ್'(ಕರಿಮಂಗ)ದ ಸ್ವಭಾವ ಅಡಗಿರುತ್ತದೆ...ಇತರರಿಗೆ ತೊಂದರೆ ಕೊಡುತ್ತಾ ತಾನು ಖುಷಿಪಡುವ ಸ್ವಭಾವ...
ಮನುಷ್ಯನ ಈ ಸ್ವಭಾವವನ್ನೇ ವಿಶ್ಲೇಷಿಸಿಕೊಂಡು, ಕೋಮುಸೂಕ್ಷ್ಮತೆ, ಭಾರತೀಯರ ಮನೋಭೂಮಿಕೆ, ಇಲ್ಲಿನ ಸಂಸ್ಕೃತಿಯ ಅನನ್ಯತೆಗಳನ್ನು ದೆಹಲಿಯಲ್ಲೊಮ್ಮೆ ಆಗಿಹೋದ ಮಂಕಿಮ್ಯಾನ್ ಪ್ರಸಂಗದ ಕೆನೆಯಲ್ಲಿರಿಸಿದ್ದಾರೆ ರಾಕೇಶ್ ಓಂಪ್ರಕಾಶ್ ಮೆಹ್ರಾ. ಅವರ ಡೆಲ್ಲಿ 6 ಚಲನಚಿತ್ರ ನೋಡುಗರಿಗೆ ಒಂದು ಅಪರೂಪದ ಪ್ರಯೋಗ.
ಒಂದು ವೇಳೆ ಅಭಿಷೇಕ್ ಬಚ್ಚನ್, ಸೋನಂಕಪೂರ್, ವಹೀದಾ ರೆಹ್ಮಾನ್ ಇಲ್ಲದಿರುತ್ತಿದ್ದರೆ, ಮಸಕ್ಕಲಿ, ಮೌಲಾದಂತಹ ಹಾಡಿಲ್ಲದಿರುತ್ತಿದ್ದರೆ, ಅಷ್ಟು ದೊಡ್ಡ ಮಟ್ಟದ ಪ್ರಚಾರವಿಲ್ಲದಿದ್ದರೆ ಈ ಚಿತ್ರ ಒಂದು ಡಾಕ್ಯುಮೆಂಟರಿಯಾಗುವ ಅಪಾಯವಿತ್ತು. ಆದರೆ ಇದನ್ನೆಲ್ಲಾ ಜೋಡಿಸಿಕೊಂಡು ಮೆಹ್ರಾ ಜನಸಾಮಾನ್ಯರಿಗೊಂದು ಒಳ್ಳೆಯ ಚಿತ್ರ ಕೊಟ್ಟಿದ್ದಾರೆ. ಅದಕ್ಕೆ ಅವರಿಗೊಂದು ಸಲಾಂ.
ರಂಗ್ ದೇ ಬಸಂತಿಯಲ್ಲೊಂದು ರೀತಿಯ ಸಾರಾಂಶವಾದರೆ ಡೆಲ್ಲಿ 6 ಇನ್ನಷ್ಟು ವಿಭಿನ್ನ. ರಂಗ್ ದೇಯಲ್ಲಿ ಸೊಗಸಾದ ದೇಶಪ್ರೇಮದ ಕಥೆಯನ್ನು ಭಾವನಾತ್ಮಕವಾಗಿ ಪ್ರಸಕ್ತ ರಾಜಕೀಯ ಸನ್ನಿವೇಶ, ಮಿಗ್ 21 ಯುದ್ಧವಿಮಾನದ ವೈಫಲ್ಯದೊಂದಿಗೆ ಹೆಣೆದಿದ್ದ ರಾಕೇಶ್, ಚಿತ್ರದ ಮೂಲಕ ಯುವ ಹೃದಯಗಳಿಗೆ ದೇಶಪ್ರೇಮದ ಹೊಸಭಾಷ್ಯೆ ಮೂಲಕ ಕಿಚ್ಚು ಹಚ್ಚಿದ್ದರು.
ಡೆಲ್ಲಿ 6ನಲ್ಲಿ ರಂಗ್ ದೇಯಂತಹ ಅಬ್ಬರವಿಲ್ಲ. ಆದರೆ ಚಿತ್ರ ಆರಂಭದಲ್ಲಿ ಒಂದಷ್ಟು ಬೋರ್ ಎನಿಸಿದರೂ ಮುಂದುವರಿದಂತೆ ಹಿಡಿದಿರಿಸುತ್ತದೆ ನಿರೂಪಣೆ.
ಅಮೆರಿಕಾದಿಂದ ದೆಹಲಿಯ ಚಾಂದನಿ ಚೌಕಕ್ಕೆ(ಡೆಲ್ಲಿ 6) ತನ್ನ ಅಜ್ಜಿಯನ್ನು(ವಹೀದಾ) ಕೊನೆ ಕಾಲ ಕಳೆಯಲು ಕರೆತರುವ ಎನ್ಆರೈ ಮೊಮ್ಮಗ ರೋಶನ್(ಅಭಿಷೇಕ್ ಬಚ್ಚನ್), ಡೆಲ್ಲಿಗೆ, ಅಲ್ಲಿನ ಬದುಕಿಗೆ, ಪರಿಸರಕ್ಕೆ, ಮೇಲಾಗಿ ಹೀರೋಯಿನ್ನಿಗೆ(ಸೋನಮ್ ಕಪೂರ್) ಮಾರುಹೋಗುತ್ತಾನೆ. ಆ ಸಮಯದಲ್ಲಿ ಕಾಲಾಬಂದರ್ ಆ ಪ್ರದೇಶದಲ್ಲಿ ಸಾಕಷ್ಟು ಕಿರಿಕಿರಿ ಮಾಡುತ್ತಿರುತ್ತದೆ(ಮಂಕಿಮ್ಯಾನ್ ಎಂಬ ಹೆಸರ ಮೂಲಕ ಕಿಡಿಗೇಡಿಗಳು ಮಾಡುವ ಕೃತ್ಯ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತದೆ). ಆರಂಭದಲ್ಲೆ ಮೊಮ್ಮಗನಿಗೆ ಇಲ್ಲಿನ ಯಾವುದೊಂದೂ ಹಿಡಿಸದೆ ಅಜ್ಜಿಯೊಂದಿಗೆ ಮತ್ತೆ ಅಮೆರಿಕಕ್ಕೆ ಮರಳಲು ಒತ್ತಾಯಿಸುತ್ತಾನೆ. ಅಜ್ಜಿಯ ಸಮಾಧಾನಕ್ಕಷ್ಟೇ ಉಳಿಯುತ್ತಾನೆ.
ಇದರ ನಡುವೆಯೇ ಅಲ್ಲಿನ ಫೋಟೋಗ್ರಾಫರ್ ಮತ್ತು ಮುದುಕ ಲಾಲಾಜಿಯ ಹದಿಹರೆಯದ ಪತ್ನಿಯ ನಡುವೆ ಅಕ್ರಮ ಸಂಬಂಧ ಮುಂದುವರಿಯುತ್ತದೆ.
ಮಂಕಿಮ್ಯಾನ್ ವಿಷಯದಲ್ಲೇ ಹಿಂದು-ಮುಸ್ಲಿಂ ನಡುವೆ ಕೋಮುಗಲಭೆ ಕೂಡಾ ಉರಿಯುತ್ತದೆ. ಸಮಾಧಾನ ಪಡಿಸಲು ಹೋದರೆ ಅಭಿಷೇಕ್ ಬಚ್ಚನ್ ಎಲ್ಲರ ವಿರೋಧ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅಜ್ಜಿಗೂ ದೆಹಲಿ ಸಾಕಾಗುತ್ತದೆ. ಆದರೆ ಈಗ ಮೊಮ್ಮಗನಿಗೆ ಇಲ್ಲಿನ ಬಗ್ಗೆ ವಿಶೇಷ ಆಸ್ಥೆ ಮೂಡುತ್ತದೆ...ಬಹುಷಃ ಪ್ರಿಯತಮೆಗಾಗಿ....ತನ್ನ ಪ್ರಿಯತಮೆ ಬಿಟ್ಟು ಕೈ ತಪ್ಪಿ ಫೋಟೋಗ್ರಾಫರ್ ಜತೆ ಇಂಡಿಯನ್ ಐಡಲ್ ಆಗಲೆಂದು ಮುಂಬೈಗೆ ಹೋಗದಂತೆ ತಡೆಯುವದಕ್ಕೆ ಮಂಕಿಮ್ಯಾನ್ ಆಗುತ್ತಾನೆ. ಅಲ್ಲೇ ಆಕೆಗೆ ಐ ಲವ್ ಯೂ ಹೇಳುತ್ತಾನೆ. ಅಷ್ಟು ಹೊತ್ತಿಗೆ ಮಂಕಿಮ್ಯಾನ್ ಹುಡುಕುತ್ತಾ ಬರುಬವವರು ಚೆನ್ನಾಗಿ ತದುಕುತ್ತಾರೆ...ಕೋಮುಗಲಭೆಗೆ ಮುಂದಾಗಿ ಪರಸ್ಪರ ಕೊಲೆ ಮಾಡಲು ಹೋದವರು ಈಗ ಮಂಕಿಮ್ಯಾನ್ ಮೇಲೆ ಮುಗಿಬೀಳುತ್ತಾರೆ...ಆ ಮೂಲಕ ಕೋಪ ಶಮನ ಮಾಡಿಕೊಳ್ಳುತ್ತಾರೆ. ಗುಂಡೇಟಿಗೂ ತುತ್ತಾಗುವ ಅಭಿಷೇಕ್ ಮೂಲಕವೇ ಚಿತ್ರದ ಸಂದೇಶವೂ ಹೊರಹೊಮ್ಮುತ್ತದೆ. ಚಿತ್ರವನ್ನು ಒಂದು ರೀತಿ ಕೊಲಾಜ್ ಮಾದರಿಯಲ್ಲಿ ಬಳಸಿಕೊಂಡಿದ್ದಾರೆ ರಾಕೇಶ್. ಅದಕ್ಕೆ ಅವರಿಗೆ ಪೂರ್ಣ ಅಂಕ.
ಅಭಿಷೇಕ್ ಬಚ್ಚನ್ ಪ್ರತಿಭೆ ಭರಪೂರ ಬಳಕೆಯಾಗಿದ್ದರೆ, ಮಸಕ್ಕಲಿ ಸೋನಂ ಚೆಂದವೋ ಚೆಂದ. ವಹೀದಾ ಇಡೀ ಚಿತ್ರಕ್ಕೇ ಸಮತೋಲನ ತಂದಿಟ್ಟಿದ್ದಾರೆ. ಸಪೋರ್ಟಿಂಗ್ ಪಾತ್ರಗಳಾದ ರಿಷಿಕಪೂರ್, ಓಂಪುರಿ, ಕುಲಕರ್ಣಿ ಇವರೆಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಮಾನವನ ಮನಸ್ಸಿನ ಸೂಕ್ಷ್ಮತೆ, ಕಾಂಪ್ಲೆಕ್ಸಿಟಿ ಇವುಗಳೆಲ್ಲದಕ್ಕೂ ಕನ್ನಡಿ ಹಿಡಿಯುವ ಚಿತ್ರಗಳು ಇನ್ನಷ್ಟು ಬರಲಿ......
Related Posts Plugin for WordPress, Blogger...