30.12.09

2010ನ್ನು ಅನಾಥ ಮಾಡಿರಿಸಿ ಹೋದ ಇಬ್ಬರು ಮಾನ್ಯರಿಗೆ....



ಅಶ್ವತ್ಥರ ಬಗ್ಗೆ ತಿಳಿಯುವುದಕ್ಕೆ ಮೊದಲು ನಾನು ಮೆಚ್ಚಿದ್ದು ಅವರ ಸ್ವರಸಂಯೋಜನೆಯ, ಅವರದ್ದೇ ಗಾನವೈಶಿಷ್ಟ್ಯದ ಸಂತ ಶಿಶುನಾಳ ಶರೀಫರ ರಚನೆಗಳನ್ನು...
ನಾನು ಬಹುಷಃ ೫-೬ನೇ ತರಗತಿಯಲ್ಲಿದ್ದಿರಬಹುದು, ಆಗಲೇ ನನ್ನ ದೊಡ್ಡಪ್ಪ, ಚಿಕ್ಕಪ್ಪಂದಿರ ಮನೆಯ ಪ್ಯಾನಾಸಾನಿಕ್ ಟೇಪ್‌ ರೆಕಾರ್ಡರ‍್ಗಳಲ್ಲಿ ಸೋರುತಿಹುದು ಮನೆಯ ಮಾಳಿಗಿ, ತೇರನೆಳೆಯುತಾರೆ ತಂಗಿ, ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೊ, ಬರಿದೆ ಬಾರಿಸದಿರು ತಂಬೂರಿ, ಅಳಬೇಡ ತಂಗಿ ಅಳಬೇಡ, ಚೋಳ ಕಡಿತ ನನಗೊಂದು ಚೋಳ ಕಡಿತ ಪದ್ಯಗಳು ಕೇಳಿಬರುತ್ತಿದ್ದವು..ರೇಡಿಯೋ ಕೇಳಿ ಮಾತ್ರವೇ ಗೊತ್ತಿದ್ದ ನನಗೆ ಆ ಟೇಪ್‌ ರೆಕಾರ್ಡರ್‌ನಷ್ಟೇ ಕೌತುಕ ಹುಟ್ಟಿಸಿದ್ದು ಆ ಒತ್ತೊತ್ತಿ ಹೇಳುವ ಗಾಯನ ಶೈಲಿ..ಅದು ಅಶ್ವತ್ಥರೆಂದು ಬುದ್ಧಿ ಬೆಳೆದ ಬಳಿಕ ಗೊತ್ತಾಯ್ತು. ಆಗ ಅವರ ಬಗ್ಗೆ ಹುಟ್ಟಿದ ಗೌರವ ಇಂದಿಗೂ ಇದೆ. ಎಂದೆಂದಿಗೂ....
ಮಂಗಳೂರಿನಲ್ಲಿ ೨೦೦೬ರ ಮೇ ೧ರಂದು ಸಂಜೆ ತಮ್ಮ ಧ್ವನಿ ತಂಡದೊಂದಿಗೆ ಅಶ್ವತ್ಥರ ಮೋಹಪರವಶಗೊಳಿಸುವ ರಸಮಂಜರಿಯನ್ನು ಹತ್ತಿರದಿಂದಲೇ ನೋಡುವ ಅವಕಾಶವೂ ನನ್ನ ಅವಕಾಶ. ಅಶ್ವತ್ಥರ ಹಾಡಿನಲ್ಲಿ ಇರುವ ಮೋಡಿ ನೋಡಿದ್ದ ನನಗೆ, ಅವರಿಗೆ ಬರುವ ಸಿಟ್ಟಿನ ಪರಿಚಯವೂ ಆಗಿದ್ದಿಲ್ಲೇ.
ಆಗ ಮೈಕ್‌ಸೆಟ್‌ನಲ್ಲಿ ಏನೋ ತೊಂದರೆ ಉಂಟಾಗಿತ್ತು...ಪದೇ ಪದೇ ಹೇಳಿದರೂ ಕೇಳದಾಗ ಸಿಟ್ಟಿಗೆದ್ದ ಅಶ್ವತ್ಥ ಮೈಕ್‌ನವರ ಜನ್ಮಜಾಲಾಡಿಸಿ ಬಿಟ್ಟಿದ್ದರು...ಬಳಿಕ ಒಂದೆರಡು ಹಾಡು ಹಾಡುವಾಗ ಮಗುಮ್ಮಾಗೇ ಇದ್ದರೂ ಕೊನೆಯಲ್ಲಿ ಮನಸಾರೆ ಆನಂದಿಸುತ್ತಾ ಹಾಡಿದ್ದರು...ನನಗೆ ಪ್ರಿಯವಾಗಿದ್ದ ಹಾಡುಗಳನ್ನು ಲೈವ್ ಆಗೇ ಕೇಳಿ ಖುಷಿ ಪಟ್ಟಿದ್ದೆ....ಈಗ ಕಂಪ್ಯೂಟರ‍್ನಲ್ಲಿ ಎಂಪಿ೩ ರೂಪದಲ್ಲಿ ಕೂತಿರುವ ಅಶ್ವತ್ಥರನ್ನಷ್ಟೇ ಕೇಳಬೇಕಿದೆ...
ಇನ್ನು ವಿಷ್ಣುವರ್ಧನರ ಬಗ್ಗೆ ಕೆಲವೇ ವಾಕ್ಯ...
ನನಗೆ ಚಿಕ್ಕಂದಿನಿಂದಲೇ ವಿಷ್ಣುವರ್ಧನ, ಪ್ರಭಾಕರ‍್ ಇಬ್ಬರೂ ಇಷ್ಟ..ಅವರ ಹೆಸರಿನ ಹಿಂದಿರುವ ಸಾಹಸಸಿಂಹ, ಟೈಗರ‍್ ಎಂಬ ಪೂರ್ವನಾಮೆಗಳು ಒಂದು ಕಾರಣವಾದರೆ ಸೊಗಸಾಗಿ ಫೈಟ್ ಮಾಡುವ ಅವರ ಶೈಲಿ ಕೂಡಾ ಅಷ್ಟೇ ಇಷ್ಟ.
ಸಿನಿಮಾಗಳನ್ನು ನೋಡುವ ಅವಕಾಶ ನಾನಿದ್ದ ಹಳ್ಳಿಯಲ್ಲಿ ಕಡಮೆ...ಹಾಗಾಗಿ ನಾನು ಚಿಕ್ಕಂದಿನಲ್ಲಿ ನೋಡುತ್ತಿದ್ದುದು ಶುಕ್ರವಾರದ ಉದಯವಾಣಿಯನ್ನು. ಅದರಲ್ಲಿ ನನ್ನ ಮೆಚ್ಚಿನ ನಟರು ನಟಿಸಿದ ಲೇಟೆಸ್ಟ್ ಚಿತ್ರಗಳು, ಅದರಲ್ಲಿ ಅವರ ಸಾಹಸದ ಫೊಟೊಗಳಿರುತ್ತಿದ್ದವು. ಇನ್ನೂ ಖುಷಿಕೊಡುತ್ತಿದ್ದುದು ಎಂದರೆ, ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ದೇವಣ್ಣ ಎಂಬವನು ವಿಷ್ಣು ಕಟ್ಟಾ ಅಭಿಮಾನಿ..ಹಾಗಾಗಿ ಆತ ಕೆಲಸ ಮಾಡುವಾಗ ನಾನೂ ಹೋಗಿ ನಿಂತು ವಿಷ್ಣು ವರ್ಧನ್ ಚಿತ್ರ ನೋಡಿದ್ಯಾ ದೇವಣ್ಣ ಎಂದು ಕೇಳುತ್ತಿದ್ದೆ...ಆತ ಹೂಂ ಎಂದರೆ ನನಗೆ ಹಬ್ಬ...

ಯಾಕೆಂದರೆ ಆತ ಆ ಚಿತ್ರದ ಕಥೆ ನನಗೆ ಹೇಳುತ್ತಿದ್ದ...ನನಗೆ ಕೇಳುವಷ್ಟೇ ಇಷ್ಟ ಅವನಿಗೆ ಹೇಳಲೂ ಇತ್ತು!
ದೊಡ್ಡವನಾದ ಬಳಿಕ ಅನೇಕ ಸಿನಿಮಾ ನೋಡಿದ್ದೇನೆ, ಬಂಧನ, ಡಿಸೆಂಬರ‍್ ೩೧, ಆಸೆಯಬಲೆ, ಸಾಹಸಸಿಂಹ, ನಿಷ್ಕರ್ಷ..ಹೀಗೆ ಪಟ್ಟಿ ಬೆಳೆಯುತ್ತದೆ..

ಗಾನಗಂಧರ್ವ ಅಶ್ವತ್ಥರಿಗೆ, ಅವರ ಆ ಮಟ್ಟದ ಸ್ವರಕ್ಕೆ, ವಿಷ್ಣುವಿಗೆ ನನ್ನ ಮತ್ತು ದೇವಣ್ಣುವಿನ ಪರವಾಗಿ ಒಂದು ಪ್ರಣಾಮ.....

27.12.09

ಕ್ಯಾಮೆರಾಮನ್‌ನ ತುಂಟತನವೂ ನಿದ್ರಾಭಂಗವೂ


ಸಭೆ, ಕಾರ್ಯಾಗಾರ, ಸಮಾವೇಶ, ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಇವೆಲ್ಲಾ ಸಾಫ್ಟ್‌ ನ್ಯೂಸ್ ಆಗಿ ನಾವು ಪ್ರಕಟಿಸಬೇಕಾದ ವಿಷಯಗಳು ಪತ್ರಿಕೆಯಲ್ಲಿ...
ಇಂತಹ ಹೆಚ್ಚಿನ ಕಡೆಯೂ ವಿಚಾರಮಂಥನ ನಡೆಯುವಾಗ ವಿಚಾರಗಳ ಗಾಂಭೀರ್ಯ ಹೆಚ್ಚಿದಾಗಲೆಲ್ಲ ಸಭಿಕರು ತಲ್ಲೀನರಾಗುತ್ತಾ ‘ತಲೆದೂಗು’ವುದೂ ಉಂಟು...ಅದರಲ್ಲೂ ಬೆಳಗ್ಗೆ ಸಖತ್ ಉಪಾಹಾರ, ಮಧ್ಯಾಹ್ನ ಭೂರಿ ಭೋಜನವಿದ್ದರಂತೂ ಮುಗೀತುಕಥೆ..
ಮೊನ್ನೆ ಸುರತ್ಕಲ್‌ನ ಎನ್‌ಐಟಿಕೆ(ಹಿಂದಿನ ಕರ್ನಾಟಕ ರೀಜನಲ್ ಇಂಜಿನೀಯರಿಂಗ್ ಕಾಲೇಜ್)ಯಲ್ಲಿ ಸುವರ್ಣ ಮಹೋತ್ಸವ*ದ ಅಂಗವಾಗಿ ಹಳೆ ವಿದ್ಯಾರ್ಥಿಗಳ ಸಮಾವೇಶ ಏರ್ಪಾಡಾಗಿತ್ತು.
ಅತಿಥಿ ಗಣ್ಯರು ಬರುವಾಗ ಭಾರತೀಯ ಸಂಪ್ರದಾಯದಂತೆ ಒಂದು ಗಂಟೆ ತಡ. ಆ ಬಳಿಕ ಎನ್‌ಐಟಿಕೆಯ ಮಾಜಿ ಪ್ರಾಂಶುಪಾಲರು, ನಿರ್ದೇಶಕರನ್ನು ಗೌರವಿಸುವುದು, ಉಪಾನ್ಯಾಸಕರು, ಬೋಧಕೇತರ ಸಿಬ್ಬಂತಿಗಳನ್ನು ಗುಲಾಬಿ ಕೊಟ್ಟು ನೆನಪಿಸಿಕೊಳ್ಳುವ ಅರ್ಥಪೂರ್ಣ ಕಾರ್ಯಕ್ರಮ..
ಆ ಬಳಿಕ ಅತಿಥಿಗಳ ಭೀಕರ ಭಾಷಣಗಳು ಶುರುವಾದವು...ಈ ನಡುವೆ ಸೀಟ್‌ಗಳಲ್ಲಿ ಕೂತ ಅನೇಕರು ಹಿಂದಿನ ದಿನ ಸುಸ್ತಿನಿಂದಲೋ ಏನೋ ನಿಧಾನವಾಗಿ ತೂಕಡಿಸಲು ಶುರುವಿಟ್ಟುಕೊಂಡರು.
ಆದರೆ ಇವರ ಸುಖನಿದ್ದೆಗೆ ಭಂಗ ತರಲು ಆಯೋಜಕರು ಒಂದು ಸೂಪರ‍್ ತಂತ್ರವನ್ನು ಕಾರ್ಯರೂಪಕ್ಕೆ ಇಳಿಸಿದ್ದರು. ಕಾರ್ಯಕ್ರಮವನ್ನು ವೇದಿಕೆಯ ಇಕ್ಕೆಲಗಳಲ್ಲಿನ ದೊಡ್ಡ ಪರದೆಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು.
ಮೂವರು ಕ್ಯಾಮೆರಾಮನ್‌ಗಳು ಶೂಟಿಂಗ್ ಮಾಡಿದ್ದು ನೇರವಾಗಿ ಬಿತ್ತರಗೊಳ್ಳುತ್ತಿತ್ತು.
ಇಲ್ಲೇ ಆಗಿದ್ದು ಎಡವಟ್ಟು. ನೋಡುವವರಿಗೆ ಚೆನ್ನಾಗಿ ಕಾರ್ಯಕ್ರಮಗಳು ಕಾಣಲೆಂದು ಮಾಡಿದ ವ್ಯವಸ್ಥೆ ನಿದ್ರಾಸಕ್ತರಿಗೆ ಕಿರಿಕ್ ಎನಿಸತೊಡಗಿತ್ತು. ಯಾಕೆಂದರೆ ಯಾರು ಕಣ್ಮುಚ್ಚಿ ದೇವೇಗೌಡರಂತೆ ದೇಶದ ಬಗ್ಗೆ ಕನಸು ಕಾಣುತ್ತಿದ್ದರೋ ಅವರ ಮೇಲೆ ಕ್ಯಾಮೆರಾಮನ್‌ನ ಗೃಧ್ರ ದೃಷ್ಟಿ ಬೀಳುತ್ತಿತ್ತು. ಅಂತಹವರ ಮೇಲೆಯೇ ಆತ ಕ್ಯಾಮೆರಾ ಲೆನ್ಸ್ ಝೂಮ್ ಮಾಡುತ್ತಿದ್ದ..ಅದನ್ನೇ ವಿಡಿಯೋ ಎಡಿಟಿಂಗ್‌ನವ ನೇರವಾಗಿ ದೊಡ್ಡ ಪರದೆಗೆ ಕಳುಹಿಸಿ ನಿದ್ದೆ ಮಾಡಿದವರ ಪಕ್ಕದಲ್ಲಿ ಕುಳಿತವರು ಪಕ್ಕೆಗೆ ತಿವಿದು ಎಬ್ಬಿಸುತ್ತಿದ್ದರು....
ತಾನೊಬ್ಬ ಇಡೀ ಕಾರ್ಯಕ್ರಮವನ್ನು ನಿಂತೆ ಶೂಟಿಂಗ್‌ ಮಾಡುವ ಶಿಕ್ಷೆಗೊಳಗಾದ ಕ್ಯಾಮೆರಾ ಮನ್‌ನ ಈಗ
ಒಳಗೊಳಗೇ ಮುಸಿಮುಸಿ ನಗುತ್ತಿದ್ದ. ನಿದ್ರಾಭಂಗವಾದವರು ಕಣ್ಣೊರಸಿ ಮತ್ತೆ ವೇದಿಕೆಯತ್ತ ಕಣ್ಣು ನಡುತ್ತಿದ್ದರು ಅಥವಾ ಪ್ರಯತ್ನ ಮಾಡುತ್ತಿದ್ದರು!


*ಇದೀಗ ಎನ್‌ಐಟಿಕೆ(national institute of technology, karnataka) ಸುವರ್ಣವರ್ಷಾಚರಣೆಯ ಸಂಭ್ರಮದಲ್ಲಿದೆ. ಆಚರಣೆಯ ಅನೇಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿವೆ...ಇದು ಕೇವಲ lighter readingಗಾಗಿ ಮಾತ್ರ

17.12.09

ಬರಡುಗದ್ದೆಗಳಲ್ಲಿ ತೊಂಡೆ ಚಪ್ಪರ ಅರಳಿತು!!!

ಬೆಳೆದು ನಿಂತ ತೊಂಡೆಚಪ್ಪರ ^
ತೊಂಡೆ ಬೆಳೆದ ಜಯಂತ ರೈ ^

ಮಿಸಿಲಕೋಡಿಯ ವಿಠಲ ರೈ^


ಇದನ್ನು ಕ್ರಾಂತಿಯೆನ್ನಬಹುದು...ಅಭಿವೃದ್ಧಿ ಎಂದೂ ಹೇಳಬಹುದು...ಆದರೆ ಕೃಷಿ, ತೋಟಗಾರಿಕೆ ದಕ್ಷಿಣ ಕನ್ನಡದಲ್ಲಿ ಕ್ಷಿಪ್ರವಾಗಿ ಇನ್ನಿಲ್ಲವಾಗುತ್ತಿರುವಾಗಲೇ ಈ ವಿದ್ಯಮಾನ ನನ್ನನ್ನಂತೂ ಖುಷಿ ತಂದಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಗೋಳ್ತಮಜಲು ಎಂಬಲ್ಲಿ ಪುಟ್ಟ ಪುಟ್ಟ ಎರಡು ಮೂರು ಹಳ್ಳಿಗಳಲ್ಲಿನ ಒಂದಷ್ಟು ಉತ್ಸಾಹಿ ಮಂದಿ ತಮ್ಮ ಬೆಟ್ಟು ಬಿದ್ದ ಗದ್ದೆಗಳಲ್ಲೀಗ ತೊಂಡೆ ಬೆಳೆದಿದ್ದಾರೆ, ಬಂಪರ‍್ ಬೆಳೆಯನ್ನೂ ಪಡೆದು ಖುಷಿಯ ನಗೆ ಬೀರಿದ್ದಾರೆ.
ಮಿಸಿಲಕೋಡಿಯ ವಿಠಲ ಪೂಜಾರಿ ಇರಬಹುದು, ಲಿಂಗಪ್ಪ ಗೌಡರಿರಬಹುದು, ದೂಜಪಿನ್ ಲೋಬೋ ಇರಬಹುದು, ಅಥವಾ ಜಯಂತ ರೈ ಇರಬಹುದು ತಮ್ಮ ಮಣ್ಣನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಮಾರದೆ, ಗದ್ದೆಗೆ ಅಡಕೆ ಹಾಕಿ ಕಾಯದೆ ಹೀಗೊಂದು ಅನ್ನಕ್ಕೆ ನೆರವಾಗುವ ಕಾಯಕದಲ್ಲಿ ತೊಡಗಿದ್ದಾರೆ.
ಖುಷಿಯ ವಿಚಾರ ಎಂದರೆ ಕಲ್ಲಡ್ಕ ಸುತ್ತಲಿನ ಮಣ್ಣು ತೊಂಡೆ ಬೆಳೆಯಲು ಬಹಳ ಉಪಕಾರಿ. ಹಾಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿ ತೊಂಡೆ ಬೆಳೆಸುವವರ ಸಂಖ್ಯೆ ವೃದ್ಧಿಯಾಗಿದೆ.
ಹಿಂದೆ ಹೀಗಿರಲಿಲ್ಲ. ಗದ್ದೆ ಬೇಸಾಯ ಸಾಕು ಎಂದು ರೈತರು ತೀರ್ಮಾನಕ್ಕೆ ಬಂದ ಕಾಲವದು, ಈಗ ಸುಮಾರು ೬-೭ ವರ್ಷ ಮೊದಲು. ಗದ್ದೆಗಳಲ್ಲಿ ಫಸಲು ತೆಗೆಯಲು ಮುಂದೆ ಬರುತ್ತಿರಲಿಲ್ಲ...ಗದ್ದೆಗಳು ಹಾಗೆಯೇ ಬರಡುಗಟ್ಟುತ್ತಿದ್ದವು. ರೈತರು ತಮಗಿದ್ದ ಅಡಕೆ ತೋಟವನ್ನೇ ನೆಚ್ಚಿಕೊಂಡರು.
ಆದರೆ ಇಲ್ಲಿನ ಕೆಲವರು ಮಾತ್ರ ಗದ್ದೆಯಲ್ಲೇ ತೊಂಡೆ ನೆಟ್ಟರು, ಪ್ರಯೋಗಾರ್ಥ. ಅದು ಯಶಸ್ವಿಯಾಯಿತು, ಅದನ್ನೇ ವಿಸ್ತರಿಸಿದರು. ಈಗ ಗೋಳ್ತಮಜಲಿನ ಸುಮಾರು ೫೦ ಎಕ್ರೆ ಪ್ರದೇಶದಲ್ಲಿ ತೊಂಡೆ ಹಬ್ಬಿದೆ. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ, ಬಿ.ಸಿ.ರೋಡುಗಳಿಗೆ ಪ್ರತಿವಾರ ಇಲ್ಲಿನ ಊರ ತೊಂಡೆ ಸೇರುತ್ತದೆ. ಕನಿಷ್ಠ ಕೆಜಿಗೆ ೮ ರುಪಾಯಿಯಿಂದ ತೊಡಗಿ ೨೦ರ ವರೆಗೂ ಗಳಿಸಿದ್ದಿದೆ. ಯಾರಿಗೂ ನಷ್ಟವಾಗಿಲ್ಲ...
ಇನ್ನು ಇಲ್ಲಿ ಬೆಳೆಸುವುದು ಪುತ್ತೂರು, ಮಂಜೇಶ್ವರ ಜಾತಿಯ ತೊಂಡೆ. ಇದಕ್ಕೆ ರುಚಿ ಹೆಚ್ಚು. ಕಳೆದ ಜೂನ್‌ನಲ್ಲಿ ಹೊಂಡ ಮಾಡಿ ಗಿಡ ನೆಟ್ಟಿದ್ದಾರೆ. ಅಕ್ಟೋಬರ್‌ನಲ್ಲಿ ಕೊಯ್ಲು ಆರಂಭವಾಗಿದೆ. ಇನ್ನು ಫೆಬ್ರವರಿ ವರೆಗೂ ಈ ರೈತರಿಗೆ ಗಿಡಕ್ಕೆ ಯಥೇಚ್ಚ ಗೊಬ್ಬರ-ನೀರು ಉಣಿಸುವುದು ಕಾಯಿ ಕೊಯ್ಯುವುದು ಇದೇ ಕೆಲಸ.
ನೆರವಾಯ್ತು ಉದ್ಯೋಗ ಖಾತರಿ: ಇಲ್ಲಿ ತೊಂಡೆ ಮತ್ತೆ ಚಿಗಿತುಕೊಳ್ಳಲು ಕಾರಣವಾದ್ದು ಉದ್ಯೋಗ ಖಾತರಿ ಯೋಜನೆ. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ, ಸಾಲ ಮಾಡುವ ಕಿರಿಕಿರಿ ತಪ್ಪಿಸಿ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ತಮ್ಮ ಭೂಮಿಯನ್ನೇ ಹಸಿರು ಮಾಡಿ, ಸರ್ಕಾರದಿಂದ ಅದಕ್ಕೇ ಪ್ರೋತ್ಸಾಹ ಧನ ಪಡಯಲು ಆಗುವ ಏಕೈಕ ಯೋಜನೆ ಇದು.
ತಮ್ಮ ಜಾಗದಲ್ಲೇ ಬೆಳೆ ತೆಗೆಯಲು ಸರ್ಕಾರ ಹಣ ನೀಡುವುದಾದರೆ ಯಾರಿಗೆ ಬೇಡ. ವರ್ಷಕ್ಕೆ ೧೦೦ ಕೆಲಸ ಆದರೆ ಅಷ್ಟಾದರೂ ಆಯ್ತಲ್ಲ ಎನ್ನುವುದು ರೈತರ ಅಂಬೋಣ.
ಒಟ್ಟಿನಲ್ಲಿ ನಗರವಾಸಿಗಳ ಹೊಟ್ಟೆ ತುಂಬಿಸಲು ಕೇವಲ ಹಣವಿದ್ದರೆ ಸಾಲದು...ಇಂತಹ ಶ್ರಮ ಜೀವಿಗಳು ಬೆಳೆದ ಭತ್ತ, ತರಕಾರಿಯೂ ಬೇಕು ತಾನೇ...
ಸರ್ಕಾರ ಏನೇನೋ ಪ್ರಯೋಜನಕ್ಕೆ ಬಾರದ, ಕೇವಲ ಅಧೀಕಾರಿಗಳು, ಮಧ್ಯವರ್ತಿಗಳ ಹೊಟ್ಟೆ ತುಂಬಿಸುವ ಯೋಜನೆಯನ್ನೇ ಮಾಡುತ್ತಾ ಬರುತ್ತಿದೆ ಎಂದು ನಂಬಿದ್ದ ನನಗೆ ಉದ್ಯೋಗ ಖಾತರಿಯಂತಹ ಯೋಜನೆ ದಕ್ಷಿಣಕನ್ನಡದಲ್ಲಿ ಮಾಡಿದ ಜಾದೂ ನೋಡಿ ನಿಜಕ್ಕೂ ಅಚ್ಚರಿ.
ಇದು ಚಿಕ್ಕ ವಿಷಯ ಇರಬಹುದು...ಆದರೆ ಚಿಕ್ಕವೂ ಕೆಲವೊಮ್ಮೆ ಪಾಠವಾದ ನಿದರ್ಶನಗಳಿವೆ ಎಂಬ ಕಾರಣಕ್ಕಾಗಿ ನಿಮ್ಮ ಮುಂದೆ ಈ ವಿಷಯ ಇರಿಸಿದ್ದೇನೆ..ಹೇಗನಿಸಿತು ದಯವಿಟ್ಟು ತಿಳಿಸಿ.

Related Posts Plugin for WordPress, Blogger...