26.1.09

ಶಾಂತಿಪ್ರಿಯ ದೇಶಕ್ಕೊಂದು ಕಂಗ್ರಾಟ್ಸ್!

ಮತ್ತೊಮ್ಮೆ ಗಣರಾಜ್ಯೋತ್ಸವ ಸಮಾರಂಭ ಅದ್ದೂರಿಯಾಗಿ ನಡೆದಿದೆ...
ಸಾಕಷ್ಟು ಭದ್ರತೆ ನಡುವೆ ಯಾವುದೇ ಅಹಿತಕರ ಘಟನೆ ಇಲ್ಲದೆ ನಡೆದಿರುವುದೇ ಅಚ್ಚರಿ!
ಅಷ್ಟರ ಮಟ್ಟಿಗೆ ಭಾರತೀಯರಲ್ಲಿ ಭಯೋತ್ಪಾದನೆ ಭೀತಿ ಮೂಡಿಸಿದೆ. ಭಾರತೀಯ ಗಣತಂತ್ರ ವ್ಯವಸ್ಥೆ ೬೦ನೇ ವರ್ಷ ಪೂರೈಸಿದೆ. ಜಗತ್ತಿನಲ್ಲೇ ವಿಶೇಷ ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರ ವ್ಯವಸ್ಥೆ.
ಭೀತಿವಾದ,
ಪ್ರತ್ಯೇಕತಾವಾದ,
ಒಡಕು,
ಕೋಮುವಾದ,
ನಕಲಿ ಜಾತ್ಯತೀತತೆ
ಬಡತನ,
ಹಸಿವು,
ಇವೆಲ್ಲ -veಗಳ ನಡುವೆಯೂ ನಾವು ಭಾರತೀಯರು...ಇದನ್ನು ಅಲ್ಲಗಳೆಯುವಂತಿಲ್ಲ. ಎಂತಹ ಸಂಕಷ್ಟ ಬಂದೊದಗಿದರೂ ಆಂತರಿಕ ಪರಿಸ್ಥಿತಿಗಳು ವಿರುದ್ಧವಾಗಿ ನಿಂತರೂ ನಾವೆಲ್ಲರೂ ಒಂದಾಗಬಲ್ಲೆವು ಎಂಬ ಸಂದೇಶ ಇತ್ತೀಚೆಗೆ ಮುಂಬೈ ಮೇಲೆ ಉಗ್ರರ ದಾಳಿ ನಡೆದ ಬಳಿಕ ಇಡೀ ದೇಶದಲ್ಲಿ ಹೊರಹೊಮ್ಮಿದೆ.
ಪಾಕಿಸ್ತಾನ ವಿರುದ್ಧ ಆರಂಭದಲ್ಲಿ ಭಾರತೀಯ ಸರ್ಕಾರ ತೋರಿದ ಜಿಗುಟು ಕಠಿಣ ಧೋರಣೆಯನ್ನು ಮುಂದುವರಿಸಿಲ್ಲ ಎನ್ನುವ ನೋವು ಅನೇಕ ಭಾರತೀಯರಲ್ಲಿ ಇರುವುದು ನಿಜ. ಆದರೂ ಭಾರತದಂತಹ ಶಾಂತಿಪ್ರಿಯ ದೇಶವನ್ನು ಪದೇ ಪದೇ ತೊಂದರೆಗೆ ಸಿಲುಕಿಸುವ ಪಾಕಿಸ್ತಾನ ಸ್ವಯಂಕೃತಾಪರಾಧಕ್ಕೆ ತಾನೇ ಸಿಲುಕುವ ಹಂತದಲ್ಲಿದೆ.
ಬಾಂಗ್ಲಾದೇಶವೆನ್ನುವ ಪುಟ್ಟ ರಾಷ್ಟ್ರವೂ ಭಾರತಕ್ಕೆ ತಲೆನೋವು ತರುತ್ತಿದೆ, ಭಾರತದ ೭ ಸೋದರಿಯರ ಒಡಲೊಳಗೆ ಪ್ರತ್ಯೇಕತಾವಾದ ಹುಟ್ಟುಹಾಕಲು ಬಾಂಗ್ಲಾ ಉಗ್ರರು ಮಸಲತ್ತು ನಡೆಸುತ್ತಿದ್ದಾಗಲೇ ಶೇಖ್ ಹಸೀನಾ ಸರ್ಕಾರ ಆಡಳಿತ ವಹಿಸಿಕೊಂಡಿದ್ದು ಒಂದಷ್ಟು ಆಶಾವಾದಕ್ಕೆ ಕಾರಣ.

ಪ್ರಜಾಪ್ರಭುತ್ವದಿನದಂದು ದೆಹಲಿ ರಾಜಪಥದಲ್ಲಿ ಶಿಸ್ತುಬದ್ಧ ಹೆಜ್ಜೆ ಹಾಕುವಷ್ಟೇ ನೀಟಾಗಿ ವೈರಿಗಳ ಹುಟ್ಟಡಗಿಸುವ ನಮ್ಮ ಯೋಧರು, ಭಾರತವಿನ್ನೂ ದೇಶವಾಗಿ ಉಳಿದಿರಲು ಕಾರಣವಾದ ಎಲ್ಲರಿಗೂ ಗಣರಾಜ್ಯ ದಿನದ ಶುಭಾಶಯಗಳು...

12.1.09

ಕೃಷಿಯಲ್ಲೂ ‘ಸಫಲ’ರಾಗಬಹುದು!!!

ನಾನು ಕೃಷಿಕರ ಬಗ್ಗೆ ಬರೆಯಲು ಹೋದಾಗಲೆಲ್ಲ ಸಿಗುತ್ತಿದ್ದುದು ಪೇಲವ ಕಥೆಗಳೇ.
ಆದರೆ ಇತ್ತೀಚೆಗೆ ಮಿತ್ರರೊಬ್ಬರು ‘ಮೂಡುಬಿದಿರೆ ಸಮೀಪ ಅಡಕೆ ಕೃಷಿಕರೊಬ್ಬರಿದ್ದಾರೆ, ಕಡಮೆ ಬಂಡವಾಳದಲ್ಲಿ ಕೃಷಿ ಮಾಡ್ತಿದಾರೆ’ ಎಂದಿದ್ದು ಕುತೂಹಲಕ್ಕೆ ಕಾರಣವಾಯ್ತು.
ಹಾಗಾಗಿ ಒಂದು ಸಂಜೆ ಆ ಮಿತ್ರರೊಂದಿಗೇ ತೋಟ ನೋಡೇ ಬಿಡೋಣ ಎಂದು ಹೊರಟೆ. ಮೂಡುಬಿದಿರೆಗೆ ಮಂಗಳೂರಿಂದ ಹೋಗುವಾಗ ಬಡಗೆಡಪದವು ಎಂಬ ಊರು ಸಿಗುತ್ತದೆ. ಮಂಗಳೂರೆಲ್ಲಾ ಕಾಂಕ್ರೀಟು ನಗರಿಯಾಗುತ್ತಿದ್ದರೂ ಎಡಪದವು, ಗುರುಪುರ, ಮೂಡುಬಿದಿರೆ, ಕಿನ್ನಿಗೋಳಿ ಇಲ್ಲೆಲ್ಲಾ ಇನ್ನೂ ಹಸಿರಿದೆ, ತೋಟ, ಗದ್ದೆ ಇದೆ. ಎಷ್ಟು ದಿನ ಗೊತ್ತಿಲ್ಲ! ಮೂಡುಬಿದಿರೆ ಮೋಹನ ಆಳ್ವರ ಶೋಭಾವನದ ಹಿಂದಿನ ಬಸ್ ಸ್ಟಾಪಲ್ಲಿಳಿದು ಸಫಲಿಗರ ಮನೆ ಕೇಳಿದರೆ ಯಾರಾದರೂ ತೋರಿಸುತ್ತಾರೆ.

ಸಂಜೀವ ಸಫಲಿಗರು ಮೊದಲು ವಿದೇಶದಲ್ಲಿ ಉದ್ಯೋಗಿಯಾಗಿದ್ದವರು. ಊರಿಗೆ ಮರಳಿ ಕೃಷಿ ಮಾಡಬೇಕು ಎಂದು ನಿರ್ಧರಿಸಿದವರು. ಸುಮಾರು ೧೦ ವರ್ಷಗಳಿಂದ ಅವರಿಗೆ ಕೃಷಿಯಲ್ಲಿ ಪ್ರಯೋಗ ಮಾಡುವ ಹುಚ್ಚು. ಸಾವಯವ ಕೃಷಿ ಸಾಧಕ ಸುಭಾಷ್ ಪಾಳೆಕರ್‍ ಅವರ ಉಪನ್ಯಾಸ, ತರಬೇತಿ ಕಾರ್ಯಾಗಾರಗಳಿಗೆ ಸಫಲಿಗ ಭೇಟಿ ಕೊಟ್ಟಿದ್ದಾರೆ.

ಆದರೆ ಅನುಷ್ಠಾನ ಮಾಡುವಾಗ ತಮ್ಮದೇ ವಿಧಾನದಲ್ಲಿ ಸಾವಯವ ಕೃಷಿ ಕೈಗೊಂಡಿದ್ದಾರೆ.
ಸಫಲಿಗರ ತೋಟದಲ್ಲಿ ಅಳವಡಿಸಿದ ವಿಧಾನಗಳು ಮೂರು.
  • ಜೀವಾಮೃತದ ಬಳಕೆ
  • ನೀರಿನ ಮಿತವ್ಯಯ
  • ತೋಟದಲ್ಲಿ ನೈಸರ್ಗಿಕತೆಯ ಉಳಿಕೆ


ಆರಂಭದಲ್ಲಿ ತೋಟಕ್ಕೆ ಸ್ಪ್ರಿಂಕ್ಲರ್‍ ಹಾಕಿಸಿದ್ದವರು ಈಗ ಅದನ್ನು ತೆಗೆದಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸುತ್ತಾರೆ. ಸ್ಪ್ರಿಂಕ್ಲರ್‍ ನೀರು ಮಣ್ಣಿನ ಮೇಲ್ಪದರಕ್ಕೆ ಹೆಚ್ಚಾಗಿ ತೇವಗೊಳಿಸುತ್ತದೆ. ಆಗ ಅಡಕೆ ಮರದ ಬೇರುಗಳು ಮೇಲಕ್ಕೆ ಬಂದು ಹರಡಿಕೊಳ್ಳುತ್ತವೆ. ಇದರಿಂದಾಗಿ ಮೇಲ್ಪದರ ಒಣಗಿದ ಕೂಡಲೇ ಮರ ಕೂಡಾ ಒಣಗುತ್ತದೆ. ಇದಕ್ಕೆ ಪರ್ಯಾಯವಾಗಿ ಸಫಲಿಗರು ಕಂಡುಕೊಂಡದ್ದು ಬದುಗಳನ್ನು(ಓಳಿ).

ಬದುಗಳಲ್ಲಿ ಜೀವಾಮೃತ ಮಿಶ್ರಿತ ನೀರನ್ನು ಬಿಟ್ಟು ಬಿಡುತ್ತಾರೆ. ಅದು ತುಂಬಿದ ಕೂಡಲೇ ನೀರನ್ನು ಇನ್ನೊಂದು ಬದುವಿಗೆ ಹರಿಸುತ್ತಾರೆ. ಇದರಿಂದ ಬದುವಿನ ನೀರು ಆಳಕ್ಕಿಳಿಯುತ್ತದೆ, ನೀರು ಹುಡುಕುತ್ತಾ ಬೇರುಗಳು ಆಳಕ್ಕಿಳಿಯುತ್ತವೆ. ಆಗ ನೀರು ಸಿಗದಿದ್ದರೂ ಮರ ಬೇಗನೆ ಒಣಗುವುದಿಲ್ಲ. ಅಲ್ಲದೆ ಬೇರು ಆಳಕ್ಕೆ ಹೋಗುವ ಕಾರಣ ಮರ ಹೆಚ್ಚು ಫಲಕೊಡುತ್ತದೆ, ದೃಢವಾಗುತ್ತದೆ. ಈ ಕಾರಣಕ್ಕೆ ಸಫಲಿಗರು ತೋಟಕ್ಕೆ ನೀರು ಕೊಡುವುದು ೮-೯ ದಿನಕ್ಕೊಮ್ಮೆ.



ಸಫಲಿಗರ ತೋಟದಲ್ಲಿ ಕಳೆಗಿಡಗಳಿಗೂ ಒಂದು ಸ್ಥಾನವಿದೆ. ಅತೀ ತೊಂದರೆ ಕೊಡುವ ಕಳೆ ಬಿಟ್ಟರೆ ಉಳಿದದ್ದನ್ನು ಹಾಗೇ ಬಿಡುತ್ತಾರೆ. ಅಡಕೆ ಮರದ ಬುಡದಲ್ಲೇ ಕೆಲಮರಗಳು ಅಡಕೆ ಮೀರಿಸುವಂತೆ ಬೆಳೆದು ನಿಂತಿವೆ. ಕೆಲ ಅಡಕೆ ಮರದ ನಾಲ್ಕೂ ಸುತ್ತಲೂ ಉಪ್ಪಾಳಿಗೆಯ ಮರಗಳು. ಅಷ್ಟಾದರೂ ಅದು ಅಡಕೆ ಇಳುವರಿಗೆ ತೊಂದರೆಯಾಗಿಲ್ಲ. ಇದು ನನ್ನ ಪ್ರಯೋಗವಷ್ಟೇ ಇಲ್ಲಿವರೆಗೆ ಮರಗಳೇನೂ ಅಡಕೆ ಮರದ ಪಾಲನ್ನು ಕಬಳಿಸಿಲ್ಲ, ಹಾಗಾಗಿದ್ದರೆ ಇಳುವರಿ ಕಡಮೆಯಾಗಬೇಕಿತ್ತಲ್ವೇ? ಪ್ರಶ್ನಿಸುತ್ತಾರೆ ಸಫಲಿಗ.

ಈ ತೋಟಕ್ಕೆ ಸೊಪ್ಪು ಹಾಕುವುದಿಲ್ಲ, ಪದೇ ಪದೇ ನೀರು ಬೇಕಿಲ್ಲ, ಕೂಲಿಯವರ ಮೇಲಿನ ಅವಲಂಬನೆ ಅತ್ಯಲ್ಪ, ರಸಗೊಬ್ಬರ ಬೇಡ, ಹಾಗಾಗಿ ನನ್ನದು ಕನಿಷ್ಠ ಬಂಡವಾಳ, ಬರುವ ಆದಾಯದಿಂದ ಜೀವನ ಸಾಗಿಸಬಹುದು ಎನ್ನುವುದು ಅವರ ಪ್ರತಿಪಾದನೆ.


ಸಫಲಿಗರ ಸಾಧನೆ ಕಥೆ ಕೇಳುತ್ತಾ ಅವರ ತೋಟದ ತಾಜಾ ಸೀಯಾಳ ಕುಡಿಯುತ್ತಾ ಅವರ ಪಕ್ಕಾ ಕೃಷಿಕರ ಮನೆಯ ಅಂಗಳದಲ್ಲಿ ಓಡಾಡುವ ಆಡು, ಕೋಳಿ, ಕರುಗಳನ್ನು ನೋಡುತ್ತಾ ಇದ್ದರೆ ಇದೇ ಜೀವನ ಎಷ್ಟು ಹಿತ ಎನಿಸತೊಡಗಿತು.

Related Posts Plugin for WordPress, Blogger...