29.4.09

ಮೇ ಫ್ಲವರ್ ದಳಗಳು

ಆಗಷ್ಟೇ ಹೂ ಬಿಡುತ್ತಿರುವ
ಮೇಫ್ಲವರಿನ ಮರ
ಕೆಳಗಿನ ಬೆಂಚಲ್ಲಿ
ಕುಳಿತ ನಾನು
ಮರದಲ್ಲಿ ಕುಳಿತ
ಒಂಟಿ ಗಿಣಿಯೂ
ವಿರಹಗೀತೆ ಹಾಡಿದೆವು!

-------------

ನಿನಗಾಗಿ ನಾನು
ಇನ್ನಷ್ಟು ಕಾಯಬಲ್ಲೆ
ಆದರೆ
ನಿನಗಾಗಿ ತಂದು
ಅರ್ಧ ಗಂಟೆಯ ಬಿಸಿಲಿಗೆ
ಒಣಗಿದ ಹೂಗೊಂಚಲುಗಳು
ಬಹುಷಃ ನಿರಾಸೆಗೊಂಡಾವು

--------------

ಕಡಲತಡಿಯ ಮರಳಲ್ಲಿ
ಬರೆದ ನಿನ್ನ ಹೆಸರು
ಮುಂದಿನ ತೆರೆಗೆ
ಕೊಚ್ಚಿ ಹೋಗಬಹುದು
ನನ್ನ ನೆನಪು ನಿನ್ನಲ್ಲಿ ಅಳಿದರೆ
ನಾನೂ ಕೊಚ್ಚಿಕೊಂಡು ಹೋದೇನು!

---------------

ನೀನು ಕೊಟ್ಟ ಕಾಣಿಕೆಗಳು
ಇಂದು ಮನದಲ್ಲಿಲ್ಲ...
ಏನಿದ್ದರೂ ನೀನು
ನನ್ನೆದೆಯಲ್ಲಿ
ಬಿತ್ತಿದ ಕಣ್ಣೀರಿನ
ನೆನಪುಗಳು ಮಾತ್ರ
---------------
ನನ್ನ ಮನದ
ಗೋಡೆಗಳಲ್ಲೆಲ್ಲ
ನಿನ್ನದೇ ಚಿತ್ರಗಳು
ಹೃದಯದ ಡಾರ್ಕ್ ರೂಮಿನಲ್ಲಿ
ಅರಳುತ್ತವೆ ನಗುವಿನ ಅಲೆಗಳು

28.4.09

ಮತ ಭಾರತ - ಮಹಾ ಭಾರತ !

ನಮ್ಮ ರಾಜ್ಯದಲ್ಲಿ ನಿರಂತರ ಎರಡನೇ ಬಾರಿಗೆ ನಡೆಯುತ್ತಿರುವ ಪ್ರಕ್ರಿಯೆ ಇದು . ಕಳೆದ ವರ್ಷವಷ್ಟೇ ರಾಜ್ಯ ವಿಧಾನಸಭೆ ಚುನಾವಣೆ ಮುಗಿಸಿದವರು ನಾವು. ನಾಡಿದ್ದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ. ದಕ್ಷಿಣ ಕನ್ನಡದ ಅಲ್ಲಿಂದಿಲ್ಲಿಂದ ಪ್ರಚಾರ, ಅದಕ್ಕೆ ಸಿಕ್ಕೋ ಮತದಾರ ಬಾಂಧವನ ಸ್ಪಂದನದ ವರದಿ ನೋಡುವಾಗಲೇ ಏಕೋ ಈ ಬಾರಿ ಸಪ್ಪೆ ಅನ್ನಿಸುತ್ತಿತ್ತು. ಮೊದಲ ಹಂತದ ಚುನಾವಣೆ ಮುಗಿದದ್ದು ಏಪ್ರಿಲ್ 23ರಂದು. ಮತದಾನದ ಶೇಕಡಾವಾರು ನೋಡಿದರೆ ಶೇ.೫೭. ಅದರಲ್ಲೂ ಬೆಂಗಳೂರಿನಂತಹ ನಗರದಲ್ಲಿ ಶೆ.೪೫ರ ಆಜುಬಾಜಿನಲ್ಲಷ್ಟೇ ಮತದಾನವಾಗಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾದಷ್ಟೂ ಮತದಾನ ಹೆಚ್ಚಾಗಬೇಕಿತ್ತು. ಆದರೆ ಇಲ್ಲಿ ವ್ಯತಿರಿಕ್ತ. ನೆರೆಯ ಕೇರಳ ರಾಜ್ಯದಲ್ಲಿ ಶೆ.೭೩ರಷ್ಟು ಮತದಾನವಾಗಿದೆ. ಆ ಮೂಲಕ ೨೦೦೪ರ ಚುನಾವಣೆಯಲ್ಲಿನ ಶೇ.೭೧ರ ದಾಖಲೆಯನ್ನು ಅದೇ ರಾಜ್ಯ ಹಿಂದಿಕ್ಕಿತು.
ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಪ್ರಚಾರವನ್ನು ಚುನಾವಣೆಗೆ ಕೊಡಲಾಗಿತ್ತು. ಎಲ್ಲಾ ಮಾಧ್ಯಮಗಳೂ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಪವಿತ್ರ ಕಾರ್ಯ, ಆದರೆ ಮತ ಮಾರಿಕೊಳ್ಳಬಾರದು ಎಂಬ ಅಂಶವನ್ನು ಪದೇ ಪದೇ ಹಾಳುತ್ತಾ ಬಂದಿವೆ. ಆದರೂ ಮತದಾನದ ದಿನ ಮಾತ್ರ ನಮ್ಮಲ್ಲಿ ಮಾತ್ರ ಯಾಕೀ ನಿರಾಸಕ್ತಿ.
ಮತದಾರರನ್ನೇ ಕೇಳಿದರೆ, ಅಯ್ಯೋ ಎಲ್ಲಾರೂ ಒಂದೇನೇ. ಅವರನ್ನು ಆರಿಸಿ ತಪ್ಪು ಮಾಡೋದು ಯಾಕೆ ಎಂಬಂತಹ ಜನರಲೈಸ್ಡ್ ಉತ್ತರ ಸಿಗುತ್ತವೆ. ಇಷ್ಟು ಸಲ ಮತದಾನ ಮಾಡಿದ್ದೇವೆ, ಏನೂ ಅಭಿವೃದ್ಧಿ ಆಗಿಲ್ಲ ಎಂಬ ಸಿನಿಕ ಹೇಳಿಕೆಗಳೂ ಸಿಗುತ್ತವೆ.
ಹಾಗೆ ನೋಡಿದರೆ ಚುನಾವಣಾ ಆಯೋಗದ ಕಠಿಣ ಕ್ರಮಗಳಿಂದಾಗಿ ಈಗೀಗ ಚುನಾವಣೆ ಅನ್ನಿಸುವುದೇ ಇಲ್ಲ. ನಾನು ಸಣ್ಣವನಿದ್ದಾಗ ಪಾರ್ಟಿಯೊಂದರ ಕಾರ್ಯಕರ್ತರೊಂದಿಗೆ ರಾತ್ರಿ ರಸ್ತೆಯಲ್ಲಿ ಸುಣ್ಣ ಬಳಸಿ ----ಪಕ್ಷಕ್ಕೆ ಮತ ದೇಶಕ್ಕೆ ಹಿತ, ಮುಂತಾದ ಘೋಷಣೆ ಬರೆಯಲು ಹೋಗುತ್ತಿದ್ದೆ. ಜೀಪ್‌ಗಳಲ್ಲಿ ರಾಗವಾಗಿ ಘೋಷಣೆ ಹೇಳುತ್ತಾ ಮತಯಾಚಿಸುವುದನ್ನು ಕೇಳಲು ಖುಷಿಯಿತ್ತು. ಮನೆಯಲ್ಲಿಯೂ ರಾಜಕೀಯ ಪ್ರಭಾವ ಸಾಕಷ್ಟಿತ್ತು, ಮಾವ ಪಕ್ಷವೊಂದರ ಸಕ್ರಿಯ ಕಾರ್ಯಕರ್ತರಾಗಿದ್ದರು. ಆಗ ಮತದಾನವೆಂದರೆ ಒಂದು ಸಂಭ್ರಮ, ಅದರಲ್ಲಿ ಊರಿಗೆ ಊರೇ ಪಾಲ್ಗೊಳ್ಳುತ್ತಿತ್ತು ಕೂಡಾ.
ಈಗ ಎಲ್ಲೂ ಬ್ಯಾನರ‍್ಗಳಿಲ್ಲ, ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ‍್ ಕೂಡಾ ತೆಗೆಸಲಾಗುತ್ತದೆ! ಬ್ಯಾನರ್‌ಗಳಿಲ್ಲದೆ ನಗರ ಸುಂದರವಾಗಿ ಕಾಣುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆಯೋಗದ ಕಟ್ಟುನಿಟ್ಟಿನ ಕ್ರಮವಿರುವುದೇನೋ ನಿಜ, ಆದರೆ ಜನರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿದಂತೆ ಕೂಡಾ ಗೋಚರಿಸುತ್ತದೆ. ಹಾಗಾಗಿಯೇ ಅಲ್ಲಿಂದಿಲ್ಲಿಂದ ಚುನಾವಣಾ ಬಹಿಷ್ಕಾರದ ಮಾತುಗಳು ಕೇಳಿಬರುತ್ತವೆ.
ಕಾರಣ ಹೀಗಿರಬಹುದೇ?
ಇದರಲ್ಲಿ ಎಲ್ಲಾ ಪಕ್ಷದವರ, ಸರ್ಕಾರಗಳ ಪಾಲೂ ಇದೆ. ಅನೇಕ ದಶಕಗಳಿಂದ ಸರಿಯಾದ ರಸ್ತೆ ಇಲ್ಲದಿರುವ, ಸಂಪರ್ಕಕ್ಕೆ ಸೇತುವೆ ಇಲ್ಲದ, ಮಳೆಗಾಲದಲ್ಲಿ ದ್ವೀಪವಾಗುವ ಊರುಗಳು ಇನ್ನೂ ನಮ್ಮಲ್ಲಿವೆ. ಇಂತಹ ಕಡೆಗಳ ಜನ ಮತ ಹಾಕಿದರೂ ತಮಗೇನೂ ಲಾಭವಿಲ್ಲದಿರುವಾಗ ಹೋಗಿ ಏನು ಪ್ರಯೋಜನ ಎಂದು ತಿಳಿದುಕೊಳ್ಳುವುದು ಸಹಜ.
ಪಕ್ಷಗಳ ನಾಯಕರು ಪರಸ್ಪರ ಕೆಸರೆರಚುವುದು, ಕೈ ಕತ್ತರಿಸುವ, ತಲೆ ಕಡಿಯುವ, ತಿಥಿ ಮಾಡುವಂತಹ ಕೀಳು ಮಟ್ಟದ ಹೇಳಿಕೆ ನೀಡುವುದು ಇವೆಲ್ಲಾ ಈಗೀಗ ಹೆಚ್ಚಿರುವುದು ಜನರ ಸಿನಿಕತನ ಹೆಚ್ಚಲು ಕಾರಣ ಅನಿಸುತ್ತದೆ. ಜಿಲ್ಲೆಯ ಹಿರಿಯರೊಬ್ಬರಲ್ಲಿ ಈಚೆಗೆ ಚುನಾವಣೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದೆ. ಹಿಂದಿನ ವೈಭವದ ಬಗ್ಗೆ ಅವರೂ ಹೇಳಿಕೊಂಡರು. ಹಿಂದೆ ವ್ಯಕ್ತಿಯೊಬ್ಬನ ವೈಯಕ್ತಿಕ ಚಾರಿತ್ಯ್ರ ಆತನಿಗೆ ಪಕ್ಷದ ಟಿಕೆಟ್ ದೊರಕಿಸಿಕೊಡುತ್ತಿತ್ತು. ಅಂದು ನಾಯಕರ ಭಾಷಣಗಳನ್ನು ಕುಳಿತುಕೊಂಡು ಕೇಳುವಂತಿತ್ತು. ಈಗ ವೈಯಕ್ತಿಕ ತೇಜೋವಧೆ ಮಾಡುವುದೇ ಭಾಷಣ ಎಂಬಂತಾಗಿದೆ. ನಮ್ಮ ಹಕ್ಕು ಎಂದು ಮಾತ್ರ ಮತದಾನ ಮಾಡಬೇಕೇ ಹೊರತು ನಿಜಕ್ಕೂ ಮತದಾನ ಮಾಡಲು ಆಸಕ್ತಿ ಇಲ್ಲ ಎಂಬುದು ಆ ಹಿರಿಯರ ಅಭಿಪ್ರಾಯವಾಗಿತ್ತು.
ಹಾಗೆಂದರೆ ನಾವು ಇನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಿಸುವಂತಿಲ್ಲವೇ?
ಹಾಗೆಂದುಕೊಳ್ಳಬೇಕಿಲ್ಲ. ಇನ್ನೂ ಮತದಾನ ವ್ಯವಸ್ಥೆಯಲ್ಲಿ ಬದಲಾವಣೆ ತಂದರೆ(ಇ-ವೋಟಿಂಗ್‌ ಮಾದರಿಯಲ್ಲಿ) ವಿದ್ಯಾವಂತರಿಂದ ಹೆಚ್ಚು ಮತದಾನ ನಿರೀಕ್ಷಿಸಬಹುದು. ಈಗೀಗ ವಿದ್ಯಾವಂತ ಅಭ್ಯರ್ಥಿಗಳೂ ಚುನಾವಣೆಗೆ ಧುಮುಕಿ(ಹಣ ಹೆಂಡದ ಹೊಳೆಯ ನಡುವೆಯೂ) ತಮ್ಮ ಅದೃಷ್ಟ ಪರೀಕ್ಷಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಬೆಳವಣಿಗೆ ಅಲ್ಲೊಂದು ಇಲ್ಲೊಂದು ಇರಬಹುದು, ಆದರೆ ಇದನ್ನು ಮತದಾರರು ಪ್ರೋತ್ಸಾಹಿಸಿದರೆ ಮುಂದೆ ಇಂತಹ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಲೂ ಬಹುದು.
......ನಾಡಿದ್ದು ಎರಡನೇ ಹಂತದ ಮತದಾನ. ಕಳೆದ ಸುಮಾರು ೩೦ ದಿನಗಳಿಂದ ರಜೆಯಿಲ್ಲದ ದುಡಿಮೆ, ಹಾಗಾಗಿ ಬ್ಲಾಗ್ ಅಪ್‌ಡೇಟಾಗಿಲ್ಲ. ಮತಸಮರದ ಅಂತಿಮ ಹಂತದಲ್ಲಿ ಅದೇ ವಿಷಯವನ್ನೇ ಇಲ್ಲಿಯೂ ಇಳಿಸೋಣ ಅನ್ನಿಸಿತ್ತು...ನಿಮ್ಮ ಅಮೂಲ್ಯ ಸಲಹೆ, ಪ್ರತಿಕ್ರಿಯೆ ಇರಲಿ.....

7.4.09

ಮಾರ್ಚ್ ಮಳೆ


ಸೂರ್ಯ ನಿಗಿನಿಗಿ ಕೆಂಡವಾಗಿ ಪ್ರಜ್ವಲಿಸುತ್ತಿದ್ದಾನೆ. ಮುದುಕರಷ್ಟೇ ಏಕೆ ಜವ್ವನಿಗರೂ ಸೆಖೆಯ ಪೆಟ್ಟು ತಾಳಲಾಗದೆ ಸುಸ್ತು ಹೊಡೆದಂತಿದ್ದಾರೆ. ಈಗೀಗ ಕೆಲ ದಿನಗಳಿಂದ ಬೆಳಗ್ಗೆ ಏಳುವಾಗಲೇ ಮೋಡ ಕ್ರಮಪ್ರಕಾರ ಕಾಣಿಸುತ್ತದೆ. ಪ್ರಾಣಿ, ಪಕ್ಷಿ, ಮನುಷ್ಯರೆಲ್ಲರೂ ಒಂದೆರಡು ಹನಿಯಾದರೂ ಸುರಿದೀತೇ ಮೇಲಿಂದ ಎಂದು ಮೇಲೆ ನೋಡುತ್ತಾರೆ.
ಹುಲು ಮಾನವರೆಲ್ಲ ಕಳೆದ ಮಳೆಗಾಲದ ವೈಭವ ನೆನಪಿಸಿಕೊಳ್ಳುತ್ತಾರೆ. ಹಕ್ಕಿಗಳೂ ಕಳೆದ ತಿಂಗಳು ಯಾವುದೋ ತೋಡಿನ ಕೊಳಕಿನ ನೀರಲ್ಲಿ ಮಿಂದದ್ದು ಜ್ಞಾಪಿಸಿಕೊಳ್ಳುತ್ತವೆ.
ಹೀಗೆ ಎಲ್ಲರೂ ಮಳೆ ನಿರೀಕ್ಷೆಯಲ್ಲಿ ದಿನಾ ಸೆಖೆಯಲ್ಲಿ ಬೇಯುತ್ತಾರೆ. ಒಂದು ದಿನ ಮೋಡ ಕಪ್ಪಾಗಿ ಆಗಸದಲ್ಲಿ ಹೆಪ್ಪುಗಟ್ಟತೊಡಗಿದೆ. ಇದರಪ್ಪನ್‌....ಮಳೆ ಸುಯ್ಯೋದಿಲ್ಲ..ಬೇಯಿಸುತ್ತೆ ಅಷ್ಟೇ..ಎಂದು ಮುದುಕರಾದಿಯಾಗಿ ಊರಿನ ಎಲ್ಲರೂ ಶಪಿಸುತ್ತಾರೆ. ಆದರೆ ಬಾಳೆಲೆಯ ಧೂಳಿನ ಮೇಲೆ ಟಪ್ ಟಪ್ ಎಂದು ನಾಲ್ಕಾರು ಹನಿ ಬಿದ್ದಂತೆ ಕಾಣುತ್ತದೆ. ಕಾಗೆಯೊಂದರ ರೆಕ್ಕೆಯ ಮೇಲೆ ಒಂದು ಹನಿ ಬಿದ್ದು ಕಾಗೆ ಖುಷಿಯಲ್ಲಿ ರೆಕ್ಕೆ ಬಡಿದಿದೆ..ಅರಳುವ ಗುಲಾಬಿ ಮೊಗ್ಗೊಂದು ತನ್ನ ಮೇಲೆ ಬಿದ್ದ ಹನಿಯನ್ನು ಹರಿದು ಹೋಗಲು ಬಿಡದೆ ತನ್ನಲ್ಲೇ ಧರಿಸಿಕೊಂಡು ಖುಷಿಪಡುತ್ತಿದೆ. ಇನ್ನಷ್ಟು ಹನಿಗಳಿಗಾಗಿ ತೋಡುಗಳು ಕಾಯುತ್ತಿವೆ. ನಿರೀಕ್ಷೆ ಮೂಡಿಸುವ ಮಳೆ ಮೋಡ ಎಲ್ಲರಿಗೂ ವಿದಾಯ ಹೇಳಿ ಯಾವುದೋ ದಿಕ್ಕಿಗೆ ಪ್ರಯಾಣ ಬೆಳೆಸುತ್ತದೆ, ತನ್ನ ಬರುವಿಕೆಗೆ ಇನ್ನೂ ಎರಡು ಕಾಯಿರಿ ಎಂದಂತೆ ಹಕ್ಕಿಗಳಿಗೆ ಭಾಸವಾಗಿದೆ!


**********************

ಮಳೆಗಾಲದಲ್ಲಿ ತುಂಬಿ ಹರಿವ ಹೊಳೆಯದು. ಈಗ ನೀರೆಲ್ಲಾ ಬತ್ತಿ ಎತ್ತಲೋ ಹೋಗಿದೆ. ಕೆಲ ಹೊಂಡಗಳಲ್ಲಿ ಮಾತ್ರ ಪಾಚಿಗಟ್ಟಿ ಯಾವ ಕೆಲಸಕ್ಕೂ ಬಾರದ ಹಸಿರು ನೀರು ತುಂಬಿಕೊಂಡಿದೆ. ಅದನ್ನು ಯಾರೂ ಬಳಸುವುದಿಲ್ಲ ಎಂಬ ಬೇಸರದಲ್ಲಿ ನದಿಯೂ ಕೆಲವೊಮ್ಮೆ ಅಳುವುದಿದೆ. ಕಳೆದ ಮಳೆಗಾಲದಲ್ಲಿ ತನುತುಂಬಿ ಹರಿದಿದ್ದು ನೆನಯುತ್ತಾಳೆ ನದಿ. ನದಿಯ ಅವಸ್ಥೆ ನೋಡಿ ಸೇತುವೆ ಮೇಲೆ ಹೋಗುವ ಜನ, ದನ, ನಾಯಿ ಎಲ್ಲರಿಗೂ ಸಂಕಟ. ಪಶ್ಟಿಮದ ಮೋಡದ ಜತೆ ಹೊರಟ ತಣ್ಣನೆ ಗಾಳಿಯೀಗ ನದಿಯ ಒಡಲಲ್ಲಿ ತಂಪುಮೂಡಿಸಿದೆ. ಇನ್ನೆರಡು ತಿಂಗಳ ನಿರೀಕ್ಷೆಗಳು ಮತ್ತೆ ತಾಜಾ ಆಗಿವೆ.

**********************

ಮೊದಲ ಮಳೆಗೆ
ಕಾಯುವುದು ಎಂದರೆ
ಮನಗೆದ್ದಾಕೆಗೆ ಮೊದಲ
ಪತ್ರ ಬರೆದು
ಉತ್ತರಕ್ಕಾಗಿ ಕಾಯುವುದು,
ಅಥವಾ
ಮಗುವಿನ ಮೊದಲ
ನುಡಿ ಕೇಳಲು
ತಾಯಿ ಹಂಬಲಿಸುವುದು
ಅಥವಾ
ಆಗ ತಾನೇ ಮೊಳಕೆ
-ಯೊಡೆದ ಬೀಜ
ಪಕ್ಕದ ಮರ ನೋಡಿ
ಅದರಂತೆ ತಾನೂ
ಆಗಬೇಕೆನ್ನುವುದು!

3.4.09

ಗುಣಮಟ್ಟದಲ್ಲಿ ಮುಂದಿರುವ 13B


ದೆವ್ವಗಳು ಮೈಮೇಲೆ ಬರೋದು, ಅಕರಾಳ ವಿಕರಾಳ ರೂಪಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ತಬ್ಬಿಬ್ಬು ಮಾಡುವುದು, ಎದೆ ಹೊಡೆದುಕೊಳ್ಳುವಂತಹ ಸೌಂಡ್ ಇಫೆಕ್ಟ್ ಇವೆಲ್ಲ ಸಾಮಾನ್ಯ ಹಾರರ‍್ ಚಿತ್ರಗಳ ಲಕ್ಷಣ..
ಆದರೆ 13B ಕೊಂಚ ಭಿನ್ನ. ಇಲ್ಲಿ ಭೀಕರ ಶಬ್ದಗಳು ವಿಕಾರ ರೂಪಗಳು ಎಲ್ಲೂ ಪ್ರಕಟಗೊಳ್ಳುವುದಿಲ್ಲ. ಪ್ರಕಟಗೊಳ್ಳುವುದು ಟಿವಿ ಕಾರ್ಯಕ್ರಮವೊಂದರ ಮೂಲಕ.
ಲವರ‍್ಬಾಯ್ ಇಮೇಜಿನ ಮಾಧವನ್‌ಗೆ ಇಲ್ಲಿ ಭಿನ್ನ ರೂಪ. ಗೃಹಸ್ಥನಾದ ಸಿವಿಲ್ ಇಂಜಿನಿಯರ‍್ ಮನೋಹರ(ಮಾಧವನ್), ಆತನ ಪತ್ನಿ(ನೀತು ಚಂದ್ರ), ತಾಯಿ, ಅಣ್ಣ, ಅತ್ತಿಗೆ, ತಂಗಿಯೊಂದಿಗೆ ಹೊಸ ಅಪಾರ್ಟ್‌ಮೆಂಟಿಗೆ ಬಂದು ಕೆಲದಿನಗಳಷ್ಟೇ ಆಗಿದೆ. 13ನೇ ಮಹಡಿಯಲ್ಲಿರುವ ಈತನ ಮನೆ ನಂಬರ‍್ 13B. ಮನೆಯಲ್ಲಿ ಇನ್ನೂ ಪೂರ್ಣ ವ್ಯವಸ್ಥೆ ಆಗಿಲ್ಲ. ದೇವರ ಚಿತ್ರಗಳು ಇನ್ನೂ ಮನೆಯ ಗೋಡೆ ಏರಿಲ್ಲ.
ಅಷ್ಟರಲ್ಲಾಗಲೇ ಮನೆಯಲ್ಲಿ ಒಂದೊಂದೇ ವಿಚಿತ್ರಗಳು ಶುರು. ಆ ಮನೆಯಲ್ಲಿ ಹಾಲು ಯಾವಾಗಲೂ ಒಡೆಯುತ್ತಲೇ ಇರುತ್ತದೆ. ಮಾಧವನ್‌ ಲಿಫ್ಟ್‌ ಒಳಗೆ ಹೋದರೆ ಅದು ಕೆಲಸ ಮಾಡುವುದೇ ಇಲ್ಲ.ಇವೆಲ್ಲ ಕಿರಿಕಿರಿ ಅನುಭವಿಸುವಾಗಲೇ ದೇವರ ಫೋಟೋ ಗೋಡೆಗೆ ಹಾಕಲು ಗೋಡೆ ಡ್ರಿಲ್ ಕೊರೆಯಲು ಬಂದ ಡ್ರಿಲ್ಲರ‍್ ಹೈಪವರ‍್ ಶಾಕ್‌ಗೆ ಒಳಗಾಗುತ್ತಾನೆ.
ಈ ನಡುವೆಯೇ ಮನೋಹರ‍್ ಅರಿವಿಲ್ಲದೆಯೇ ಹೊಸ ಬೆಳವಣಿಗೆ. ಮಧ್ಯಾಹ್ನದ ಟಿವಿ ಶೋ ನೋಡುತ್ತಿರುವಾಗಲೇ ಟಿವಿಯಲ್ಲಿ ಚಾನೆಲ್ ತಾನಾಗಿ ಬದಲಾಗುತ್ತದೆ. ‘ಸಬ್ ಖೈರಿಯತ್ ಹೇ’ ಎಂಬ ಈ ಧಾರಾವಾಹಿಯಲ್ಲೂ ಒಂದು ಕುಟುಂಬ ಮನೋಹರನ ಕುಟುಂಬದ ಹಾಗೆಯೇ ಹೊಸಮನೆಗೆ ಬಂದಿರುತ್ತದೆ. ಈ ಧಾರಾವಾಹಿಯ ಚಾನೆಲ್ ಬದಲಾಯಿಸುವುದೂ ಅಸಾಧ್ಯ. ನೋಡಲೇಬೇಕಾದ ಪರಿಸ್ಥಿತಿ. ಕೊನೆಗೂ ಕುಟುಂಬದ ಮಹಿಳೆಯರು ಕುಳಿತು ಇದನ್ನು ಆಕರ್ಷಣೆಯಿಂದ ನೋಡುತ್ತಿರುತ್ತಾರೆ.
ಆಕಸ್ಮಿಕವಾಗಿ ಮನೋಹರ ಕೂಡಾ ಒಮ್ಮೆ ಇದನ್ನು ನೋಡುತ್ತಾನೆ. ತನ್ನ ಕುಟುಂಬದ ಕಥೆಯೇ ಅಲ್ಲಿ ಬಂದಂತಾಗುತ್ತದೆ, ಅಷ್ಟೇ ಅಲ್ಲ, ಮುಂದೆ ತನ್ನ ಕುಟುಂಬಕ್ಕೆ ಏನಾಗುತ್ತದೆ ಎನ್ನುವುದೂ ಈ ಧಾರಾವಾಹಿಯಲ್ಲಿ ನೋಡಿದಾಗ ತಿಳಿಯುತ್ತದೆ.
ಕೊನೆಗೂ ಕೆಲದಶಕಗಳ ಹಿಂದೆ ಸತ್ತು ಹೋದವರ ಆತ್ಮಗಳೇ ಟಿವಿಯಲ್ಲಿ ಪ್ರಕಟಗೊಳ್ಳುವುದು ಮನೋಹರನಿಗೆ ತಿಳಿಯುತ್ತದೆ...ಇನ್ನೂ ನಾನು ಕಥೆ ಹೇಳಿದರೆ ನಿಮ್ಮ ಆಸಕ್ತಿ ಹೋದೀತು..ಹಾಗಾಗಿ ಕಥೆ ಇಲ್ಲಿಗೇ ನಿಲ್ಲಿಸುವೆ. ವಿಕ್ರಮ ಕುಮಾರ‍್ ನಿರ್ದೇಶನದ ಈ ಚಿತ್ರ ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿದೆ. ಮಾಧವನ್ ಪ್ರಬುದ್ಧ ಅಭಿನಯ, ನೀತು ಚಂದ್ರ ತುಂಟ ಪತ್ನಿಯಾಗಿ, ಡಾಕ್ಟರ‍್ ಶಿಂಧೆಯಾಗಿ ಸಚಿನ್ ಖೇಡೇಕರ‍್ ಗಮನ ಸೆಳೆಯುತ್ತಾರೆ.
ಖಂಡಿತವಾಗಿ ಇತ್ತೀಚೆಗಿನ ಹಾರರ‍್ ಚಿತ್ರಗಳಲ್ಲಿ ಗುಣಮಟ್ಟದಲ್ಲಿ ಮೇಲ್ಪಂಕ್ತಿಯಲ್ಲಿರುವ ಚಿತ್ರ 13B.
Related Posts Plugin for WordPress, Blogger...