18.1.16

ಕುದುರೆಮುಖ ಸೈಕಲ್ ಪಯಣಕೆ ಸೈ

ಬೈಕ್ ಖರೀದಿಸಿದ ಆರಂಭದಲ್ಲಿ ನೂರಾರು ಕಿ.ಮೀ ಬೈಕಲ್ಲೇ ಸುತ್ತುವ ಕ್ರೇಜ್ ನನ್ನದಾಗಿತ್ತು. ಕಾರು ಬಂದ ನಂತರ ಕೆಲವೊಮ್ಮೆ ದೂರದೂರಿಗೆ ಕಾರ್ ಡ್ರೈವ್ ಮಾಡುವುದೂ ಖುಷಿ ಕೊಡುತ್ತಿತ್ತು.
ನಿಸರ್ಗ ಪ್ರಿಯರಿಗೆ ಟ್ರೆಕಿಂಗ್ ಎಂದೆಂದಿಗೂ ಹುಚ್ಚಾಗಿಯೇ ಉಳಿಯುವಂಥದ್ದು, ಹಾಗೆ ನಾನು ಅದನ್ನು ಬಿಡುವುದಿಲ್ಲ....
ಆದರೆ ಒಂದು ವರ್ಷದಿಂದ ಸಂಗಾತಿಯಾಗಿರುವ ಸೈಕಲಲ್ಲಿ ಹೊಸ ಹೊಸ ಪ್ರದೇಶ ಸುತ್ತುವ, ಆ ಮೂಲಕ ಅನುಭವ ಹೆಚ್ಚಿಸಿಕೊಳ್ಳುವ ಅಪೂರ್ವ ಅವಕಾಶ.
ಸೈಕಲ್ ಪ್ರಿಯರಿಗೆ ಈಗೀಗ ಗರಿಷ್ಠ ಸ್ಪರ್ಧೆ ಸವಾಲುಗಳು ತೆರೆಯುತ್ತಿರುತ್ತವೆ. ಸೈಕಲ್ಲಿಗನೊಬ್ಬನಿಗೆ ಅವಿರತವಾಗಿ ಪೆಡಲು ತುಳಿದು ಗರಿಷ್ಠ ದೂರ ಕ್ರಮಿಸಿ, ನೆಲದ ಏರಿಳಿತಗಳನ್ನು ನಿವಾಳಿಸಿಕೊಂಡು ಗುರಿ ಸಾಧಿಸುವುದು ಎಂದಿಗೂ ಸವಾಲು.
ಒಂದು ಹಂತದ ಅಭ್ಯಾಸದ ಬಳಿಕ ಸಮತಳದಲ್ಲಿ ಸೈಕಲ್ ಮೆಟ್ಟುವುದು ದೊಡ್ಡ ವಿಚಾರವೇಲ್ಲ. ಆದರೆ ಘಟ್ಟ ಪ್ರದೇಶಗಳಲ್ಲಿ ಏರಿಳಿಯುವುದು ಸೈಕಲ್ ಪಟುವಿನ ಹಂಬಲ. ಅಂಥ ಗುರಿ ನನ್ನ ಮುಂದೆಯೂ ಇತ್ತು. ದಿಢೀರ್ ಆಗಿ 1000 ಮೀಟರ್ ನಷ್ಟು
ನಾಲ್ಕು ಮೆರಿಡ ಸೈಕಲ್ಲುಗಳು
ಎತ್ತರಕ್ಕೆ ಏರಿಬಿಡುವ ಪ್ರದೇಶಗಳಾದ ಶಿರಾಡಿ, ಚಾರ್ಮಾಡಿ, ಮಾಳ ಘಾಟಿ, ಆಗುಂಬೆ ಘಾಟಿ, ಅದನ್ನೂ ಏರಿ ಮುಂದುವರಿದರೆ ಕುಂದಾದ್ರಿ ಶಿಖರವೇರುವುದು ಇವೆಲ್ಲವೂ ಮಂಗಳೂರಿನ ಅನೇಕ ಸೈಕಲ್ಲಿಗರಿಗೆ ಒಂದೊಂದು ಪರೀಕ್ಷೆ ಪಾಸಾದ ಹಾಗೆ. ಇದನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ಮಂಗಳೂರು ಸೈಕಲ್ಲಿಗರ ಸಂಘದ  ಘಟಾನುಘಟಿಗಳು ಅನೇಕರಿದ್ದಾರೆ.








ಮೊದಲ ಪರೀಕ್ಷೆಯಾಗಿ 100 ಕಿ.ಮೀ ಕೆಲ ದಿನಗಳ ಹಿಂದೆ ಕಾರ್ಕಳ-ಮೂಡುಬಿದಿರೆ ಮಾರ್ಗವಾಗಿ ಪೂರೈಸಿದ್ದೆ. ಮುಂದಿನದ್ದು ಘಟ್ಟವೇರುವ ಗುರಿ. ಈಚೆಗೆ ಕೆಲ ದಿನಗಳ ಹಿಂದೆ ಅಶೋಕವರ್ಧನರು ಕುದುರೆಮುಖ ಹೋಗೋಣ್ವೇ ಎಂದಾಗ ಜೈ ಅಂದೆ.
ಅಶೋಕರ ನೇತೃತ್ವದಲ್ಲಿ ಎಂಸಿಎಫ್ ಕಂಪನಿಯ ಚಿನ್ಮಯ ದೇಲಂಪಾಡಿ, ಮೇಸ್ಟ್ರು ಅರವಿಂದ ಕುಡ್ಲ ಹಾಗೂ ನಾನು ಒಟ್ಟಿಗೆ ನಾಲ್ವರ ಕೂಟ ತಯಾರಾಯ್ತು. ಕುದುರೆಮುಖವನ್ನು ಒಂದೇದಿನ ಏರುವುದು, ಇಳಿಯುವುದು, ಒಟ್ಟಿಗೆ 200 ಕಿ.ಮೀ ಒಂದೇ ದಿನದಲ್ಲಿ ಪರಿಕ್ರಮಿಸುವುದು ನಮ್ಮ ಗುರಿ.
ಮಕರ ಸಂಕ್ರಾಂತಿಯ ದಿನದಂದೇ ಮುಂಜಾನೆ ಹೊರಟುಬಿಟ್ಟೆವು. ಮೂವರು ಮಂಗಳೂರಿನಿಂದ ಬಂದರೆ ನಾನು ಸುರತ್ಕಲ್ಲಿಂದ ಸೇರಿಕೊಂಡೆ. ಇನ್ನೋರ್ವ ಸೈಕ್ಲಿಂಗ್ ಪಟು, ಅಭಿಜಿತ್ ಆಗತಾನೇ ಮೈಸೂರಿನಿಂದ ಊರಿಗೆ ಬಂದವನು ನಮ್ಮನ್ನು ಹಿಂಬಾಲಿಸಿ ಬೈಕ್ನಲ್ಲಿ ಬಂದು ತಂದ ಕಿತ್ತಳೆಗಳನ್ನು ನಮಗೆ ಕೊಟ್ಟ, ಪಡುಬಿದ್ರಿಯಲ್ಲಿ ಜತೆಗೆ ಕಾಫಿ ಕುಡಿದೆವು, ನಂತರ ನಾವು ಪ್ರಯಾಣ ಮುಂದುವರಿಸಿದೆವು.
ಸುಮಾರು 9 ಗಂಟೆ ವೇಳೆಗೆ ಬಜಗೋಳಿ ತಲಪಿದೆವು, ಬೆಳಗ್ಗಿನ ಲಘೂಪಹಾರ ಎಲ್ಲೋ ಮಾಯವಾಗಿತ್ತು. ಬಜಗೋಳಿಯಲ್ಲಿ ಹೊಟ್ಟೆ ಗಟ್ಟಿಯಾಗುವಷ್ಟೂ ಹೊಡೆದು ಪೆಡಲಿಂಗ್ ಮುಂದುವರಿಸಿದೆವು. ಕುದುರೆಮುಖದ ತಳಭಾಗ ಮಾಳ ಗೇಟ್ ದಾಟಿ ಮುಂದುವರಿದೆವು.
ಕಣ್ಮನ ಸೆಳೆಯುವ ಮಾಳ ಘಾಟಿಯ ಆರಂಭದಲ್ಲೇ ಫೊಟೊ ಕ್ಲಿಕ್ಕಿಸಿಕೊಂಡೆವು. ಅಲ್ಲಿ ವರೆಗೂ ಯಾವುದೇ ಸಮಸ್ಯೆಯಾಗಲಿಲ್ಲ. ಸುಮಾರು 65-70 ಕಿ.ಮೀ ಕ್ರಮಿಸಿದ್ದಾಗಿತ್ತು. ಮುಂದಿನ 18 ಕಿ.ಮೀ ಕ್ರಮಿಸುವಾಗ ನಾವು ಸಮುದ್ರ ಮಟ್ಟದಿಂದ 1000 ಮೀಟರ್ ಎತ್ತರಕ್ಕೇರಬೇಕಿದೆ. ಎಂದರೆ ನಿರಂತರವಾಗಿ ಏರುತ್ತಲೇ ಇರಬೇಕು! ಇದುವೇ ನಿಜವಾದ ಸವಾಲು.
ಆಗಲೇ 70 ಕಿ.ಮೀ ನಿರಂತರವಾಗಿ ಪೆಡಲಿಸಿದ್ದರಿಂದ ಸಹಜವಾಗಿಯೇ ಕಾಲುಗಳಲ್ಲಿನ ಶೇ.60ರಷ್ಟು ಬಲ ಖಚರ್ಾಗಿತ್ತು. ದೊಡ್ಡ ಗಿಯರುಗಳಲ್ಲಿ ಸೈಕಲ್ ತುಳಿಯುವುದಕ್ಕೆ ಸಾಧ್ಯವೇ ಇರಲಿಲ್ಲ. ಹಾಗಾಗಿ ಕ್ಲೈಂಬಿಂಗ್ ತಜ್ಞ ಚಿನ್ಮಯ ದೇಲಂಪಾಡಿಯ ಸಲಹೆಯಂತೆ ಮುಂದಿನ ಗಿಯರು 1 ಹಾಗೂ ಹಿಂದೆ 2,3, 4ರ ಕಾಂಬಿನೇಶನ್ನಲ್ಲೇ ಮುಂದುವರಿದೆ. ತಿಂಗಳ ಹಿಂದೆಯಷ್ಟೇ ಮೈಸೂರು-ನಾಗರಹೊಳೆ 200 ಕಿ.ಮೀ ಸೈಕ್ಲಿಂಗ್ ಯಶಸ್ವಿಯಾಗಿ ಮುಗಿಸಿದ್ದ ಚಿನ್ಮಯ ಸುಸ್ತೇ ಆಗದ ರೀತಿಯಲ್ಲಿ ಏರುತ್ತಾ ಮುಂದೆ ಸಾಗುತ್ತಿದ್ದರೆ, ಕುದುರೆಮುಖ, ಶಂಸೆ ಭಾಗದಲ್ಲಿ ಶಿಕ್ಷಕನಾಗಿದ್ದು ಸೈಕಲ್ನಲ್ಲೇ ಓಡಾಡಿದ ಅನುಭವಿ ಅರವಿಂದ ಕೂಡಾ ನಿರಾಯಾಸವಾಗಿ ಹೋಗುತ್ತಿದ್ದರು. ಅಶೋಕವರ್ಧನರು ಎಂದಿನಂತೆ ಅಲ್ಲಲ್ಲಿ ನಿಂತು ಫೊಟೊ ತೆಗೆಯುತ್ತಾ ನಮ್ಮನ್ನು ಹಿಂಬಾಲಿಸುತ್ತಿದ್ದರು. ಎರಡೂ ಬದಿ ಹಸಿರು ಗಮನ ಸೆಳೆದರೂ ನಮ್ಮನ್ನು ಆಳವಾಗಿ ನಾಟಿದ್ದೆಂದರೆ ಪರಿಸರ ಮೇಲಿನ ಅತ್ಯಾಚಾರ. ಘಟ್ಟದಿಂದ ಇಳಿದು ಬರುವ ಝುಳು ಝುಳು ಝರಿಗೆ ಗೋಣಿಯಲ್ಲೇ ಕಸ, ತ್ಯಾಜ್ಯ, ಕೊಳಕನ್ನು ತಂದು ಸುರಿಯಲಾಗುತ್ತಿತ್ತು. ಅದೇ ನೀರು ನದಿಯಾಗಿ ನಾಡು ಸೇರುತ್ತದೆ! ಯಾರಿಗೆ ಹೇಳೋದು!
ಅಂತೂ ಉಸ್ಸಪ್ಪಾ, ಬುಸ್ಸಪ್ಪಾ ಎನ್ನುತ್ತಾ ಎಸ್ಕೆ ಬಾರ್ಡರ್ ಸೇರಿಕೊಂಡೆವು. ಅಲ್ಲಿವರೆಗೂ ನಿರಂತರ ಚಡಾವು. ಇನ್ನು ಮುಂದೆ ಒಂದಷ್ಟು ಇಳಿತ, ಮತ್ತೆ ಏರು ಇವುಗಳ ಹದವಾದ ಮಿಶ್ರಣ. ಇಳಿಯುವಾಗ ಪೆಡಲಿನಲ್ಲಿ ನಿಂತು ಆಹ್ಲಾದಕರ ತಂಗಾಳಿ ಆಸ್ವಾದಿಸುತ್ತಾ ಸಾಗುವಾಗ ಬಳಲಿಕೆ ಒಂದಷ್ಟು ಮಾಯವಾಗಿ ಮುಂದಿನ ಏರಿಗೆ ತುಸು ಸಹಾಯವಾಗುತ್ತದೆ. ಬಿಸಿಲಿನ ಪೆಟ್ಟು ಇದ್ದರೂ ಗಾಳಿಯಿಂದ ಅಷ್ಟಾಗಿ ಗೊತ್ತಾಗಲಿಲ್ಲ. ಲಕ್ಯಾ ಡ್ಯಾಂನಿಂದ ಮುಂದೆ ಜು....ಂಯ್ಯನೆ ಇಳಿದು ಮಲ್ಲೇಶ್ವರ ಕುದುರೆಮುಖ ಟೌನ್ಶಿಪ್ ಸೇರಿದಾಗ ಗಂಟೆ 2.30 ಮಧ್ಯಾಹ್ನ.
ಅಲ್ಲಿಯ ಅತಿಥಿಗೃಹ ಹುಡುಕಿಕೊಂಡು ಹೋಗಿ ಭೋಜನಗೃಹದಲ್ಲಿ ಕುಳಿತಾಗ ಕಾಲೇಜಿನ ವಿದ್ಯಾಥರ್ಿಗಳು ಪ್ರವಾಸ ಬಂದವರು ತುಂಬಿ ತುಳುಕುತ್ತಿದ್ದರು. 40 ನಿಮಿಷ ತಡವಾಗಿ ಊಟ ದಕ್ಕಿತು. ಆಗಲೇ ನಮ್ಮ ಕಾಲುಗಳು ವಿಶ್ರಾಂತಿ ಬಯಸುವುದು ಸ್ಪಷ್ಟವಾಗಿತ್ತು.
ಇಂದೇ ಹೋಗುವುದು ಬೇಡ, ಇನ್ನು ಅಸಾಧ್ಯ ಎಂದು ಅಶೋಕರಿಂದ ಇಂಗಿತ ವ್ಯಕ್ತವಾಯಿತು, ನಮ್ಮ ಮನಸ್ಸಿನಲ್ಲಿದ್ದುದೂ ಅದೇ ಆಗಿತ್ತು. ಹೊಟ್ಟೆ ಬಿರಿಯುವಂತೆ ಊಟ ಮಾಡಿ, ಜು....ಂಯ್ಯನೆ ಇಳಿದ ಭಾಗವನ್ನು ಮತ್ತೆ ಏರುವುದು, ಮತ್ತೆ 100 ಕಿ.ಮೀ ಹಿಂದೆ ಪೆಡಲು ಮಾಡುವುದು ತೀರಾ ಕಷ್ಟ, ಅಲ್ಲದೆ ಊರು ಸೇರುವಾಗ ತಡರಾತ್ರಿಯೇ ಆಗಿಬಿಡಬಹುದು ಎಂಬ ಕಾರಣಕ್ಕೆ ಅದನ್ನು ಕೈಬಿಟ್ಟೆವು.
ಅರವಿಂದ ಮೇಸ್ಟ್ರು ತಮ್ಮ ಹಿಂದಿನ ಸಂಪರ್ಕವನ್ನೆಲ್ಲಾ ಬಳಸಿ ಅರಣ್ಯ ಇಲಾಖೆಯ ಭಗವತಿ ಕ್ಯಾಂಪ್ನಲ್ಲಿ ವಿಶ್ರಾಂತಿ ಗೃಹ ಪಡೆಯುವಲ್ಲಿ ಯಶಸ್ವಿಯಾದರು. ಕ್ಷಯಿಸುತ್ತಿರುವ ಕುದುರೆಮುಖ ಪೇಟೆಯ ಏಕೈಕ ಹೊಟೇಲ್ನಲ್ಲಿ ಚಹಾ ಸೇವಿಸಿ, ಸೈಕಲ್ಲೇರಿದೆವು, ಲಕ್ಯಾ ಡ್ಯಾಂ ದಾರಿಯಲ್ಲಿ ಕರೆಯಿತು. ಅಡ್ಡ ಗೇಟಿನ ಅಡೆತಡೆ, ಸೈಕಲ್ ತಳ್ಳುತ್ತಾ ಲಕ್ಯಾ ಡ್ಯಾಂ ಸೇರಿದೆವು. ಅನುಮತಿ ಎಲ್ಲಿ ಎಂದು ದೊಣ್ಣೆನಾಯಕರ ಪ್ರಶ್ನೆ. ಅವರಿಗೆ ಒಂದಷ್ಟು ಸಮಜಾಯಿಷಿ ಕೊಟ್ಟೆವು. ಲಕ್ಯಾಡ್ಯಾಂನ ಅಚ್ಚುಕಟ್ಟು ಪ್ರದೇಶದಲ್ಲಿ ತುಂಬಿರುವ ಹೂಳಿನ ಮೇಲೆ ಗಾಳಿಮರಗಳು ಯಥೇಚ್ಚವಾಗಿ ಬೆಳೆದುನಿಂತಿವೆ.
ಭಗವತಿ ಶಿಬಿರದ ದಾರಿ
ರಾತ್ರಿಯ ತಂಗುದಾಣ
ಐದು ನಿಮಿಷ ವೀಕ್ಷಣೆ ಬಳಿಕ ಸೈಕಲ್ ತುಳಿಯುತ್ತಾ ಭಗವತಿ ಕ್ಯಾಂಪ್ ಸೇರುವಾಗ ದಿನಮಣಿ ವಿದಾಯ ಹೇಳಿದ್ದ.
ರಾತ್ರಿಯ ಛಳಿಯಲ್ಲಿ ಭಗವತಿ ಕ್ಯಾಂಪ್ ಸಿಬ್ಬಂದಿ ರುಚಿಕರವಾಗಿಯೇ ಅಡುಗೆ ಮಾಡಿ ಬಡಿಸಿದರು. ಬೆಂಗಳೂರಿನ ಟ್ರೆಕ್ಕಿಂಗ್ ತಂಡವೊಂದು ಕುರಿಂಜಾಲು ಗುಡ್ಡ ಏರಿದ ಸಂಗತಿ ಅರುಹಿತು. ಅವರೊಡನೆ ತುಸು ಹರಟಿ, ಹಾಕಿದ್ದ ಬಟ್ಟೆಯಲ್ಲೇ ಬಿದ್ದುಕೊಂಡೆವು.(ಹದ ಬಿಸಿ ನೀರಿನ ಝಳಕ ಮಾಡಲು ಮರೆಯಲಿಲ್ಲ.)
****
ಮುಂಜಾನೆ 5ಕ್ಕೇ ಎಚ್ಚರವಾಗಿತ್ತು. ಮತ್ತೆ ಮರು ಪ್ರಯಾಣಕ್ಕೆ ಸಿದ್ಧವಾಗಬೇಕಾದರೆ ಬೆಳಕು ಹರಿಯಲೇ ಬೇಕು, ಅಷ್ಟೂ ಮಂಜಿನ ತೆರೆ ಬಿದ್ದಿತ್ತು. ಅಂತೂ ಚಹಾ ಗುಟುಕರಿಸಿ 7 ಗಂಟೆಗೆ ಹೊರಟೆವು.
ಮುಂಜಾನೆ ಮರ, ಹುಲ್ಲು, ಶೋಲಾ ಕಾಡಿನುದ್ದಕ್ಕೂ ಹಬ್ಬಿದ್ದ ಮಂಜು ಇಡೀ ಪರಿಸರಕ್ಕೇ ಶೋಭೆ ಕೊಟ್ಟಿತ್ತು. ಅದರ ಮಧ್ಯೆ ಸದ್ದಿಲ್ಲದೆ ಸೈಕಲ್ ತುಳಿಯುವುದು ಆಹ್ಲಾದಕರ. ಏರಿದ ಕಷ್ಟ ನೋಡಿದರೆ ಇಳಿಯುವುದಕ್ಕೇನೂ ಕಷ್ಟವಾಗಲಿಲ್ಲ, ದಾರಿ ಮಧ್ಯೆ ಬೇಕಾದಷ್ಟೂ ಫೊಟೊ ತೆಗೆದುಕೊಂಡು ಇಳಿದೆವು. ಕಡಾರಿಯ ಹೊಟೇಲ್ ಟೂರಿಸ್ಟ್ನಲ್ಲಿ ಹದವಾದ ನೀರು ದೋಸೆ ಜತೆ ಗಟ್ಟಿ ಚಟ್ನಿ, ಅದರ ಮೇಲೆ ಬನ್ಸ್ ಜಮಾಯಿಸಿ ಮತ್ತೆ  ಏರಿದ ಬಿಸಿಲಿನಲ್ಲಿ ಉಸ್ಸಾಬುಸ್ಸಾ ಮಾಡುತ್ತಾ ಮನೆ ಸೇರುವಾಗ ಮಧ್ಯಾಹ್ನ 1 ಗಂಟೆ.
ಎರಡು ದಿನದಲ್ಲಿ ನಿರಂತರವಾಗಿ 100 ಕಿ.ಮೀ ಸೈಕಲ್ ತುಳಿದದ್ದು ಕನಸೇ ಅಥವಾ ನಿಜವೇ ಎಂದು ನನಗೆ ನಾನೇ ಕೇಳುವಂತಹ ಪರಿಸ್ಥಿತಿ. ನಮ್ಮೆಲ್ಲರ ಹಿರಿಯ ಇಳಿವಯಸ್ಸಿನ ಅಶೋಕವರ್ಧನರು ನಮಗಿಂತಲೂ ಅದ್ವಿತೀಯರಾಗಿ ಸೈಕಲ್ ತುಳಿದದ್ದು ಮಾತ್ರ ಅದಕ್ಕಿಂತ ದೊಡ್ಡ ಅಚ್ಚರಿ.
ಮಧ್ಯೆ ಸೈಕಲ್ ಟ್ಯೂಬ್ ಟುಸ್ಸೆಂದು ಧರಾಶಾಯಿಯಾದಾಗ ತಮ್ಮ ಹೊಸ ಟ್ಯೂಬ್ ಕೊಟ್ಟು ಸಹಕರಿಸಿದ್ದ ಚಿನ್ಮಯ, ಪ್ರೋತ್ಸಾಹಿಸಿದ ಅಶೋಕವರ್ಧನ, ಹಕ್ಕಿಗಳ ಸ್ವರ ಕೇಳಿಯೇ ಹೆಸರು ಹೇಳಿ ಅಚ್ಚರಿ ಮೂಡಿಸುತ್ತಿದ್ದ ಅರವಿಂದರಿಗೆ ನನ್ನಿ...
----------------------
ಇಲ್ಲಿಗೆ ಸೈಕಲ್ ಯಾತ್ರೆಯ ಈ ಅಧ್ಯಾಯವು ಸಂಪೂರ್ಣಂ


Related Posts Plugin for WordPress, Blogger...